ಕೊರೊನಾ ವೈರಸ್ ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ, 6ನೇ ತರಗತಿವರೆಗೂ ಮಾರ್ಚ್ 13ರವರೆಗೆ ನಡೆಸಿದ ಸಿಸಿಇ ಮೌಲ್ಯಮಾಪನದಡಿ ವಿದ್ಯಾರ್ಥಿಗಳು ಗಳಿಸಿದ ಅಂಕ ಅಥವಾ ಶ್ರೇಣಿ ಆಧರಿಸಿ ಸಂಕಲನಾತ್ಮಕ– 2 ಮೌಲ್ಯಮಾಪನದ ಫಲಿತಾಂಶ ನೀಡಲು ಸರ್ಕಾರ ತಿಳಿಸಿದೆ. ಈ ವರ್ಷ 7ನೇ ತರಗತಿಗೆರಾಜ್ಯದಾದ್ಯಂತ ಸಾಮಾನ್ಯ ಮೌಲ್ಯಾಂಕನ ನಡೆಸಲು ಎಲ್ಲ ಸಿದ್ಧತೆಗಳು ನಡೆದಿದ್ದು, ಎಲ್ಲವೂ ಸರಿ ಇದ್ದಿದ್ದರೆಇದೇ 17ರಿಂದ ಈ ಕಾರ್ಯ ಪ್ರಾರಂಭವಾಗಬೇಕಿತ್ತು. ಈಗ ಕೊರೊನಾದ ಪರಿಣಾಮದಿಂದ ಮಾರ್ಚ್ 31ರವರೆಗೆ ಪರೀಕ್ಷಾ ಸಿದ್ಧತಾ ರಜೆ ಘೋಷಿಸಿ, ನಂತರದದಿನಗಳಲ್ಲಿ ಮೌಲ್ಯಾಂಕನ ಕಾರ್ಯ ನಡೆಸುವುದಾಗಿ ತಿಳಿಸಲಾಗಿದೆ.
ಸರ್ಕಾರಿ ಶಾಲಾ ಮಕ್ಕಳಿಗೆ, ಅದೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಹೀಗೆ ದೀರ್ಘ ರಜೆ ನೀಡಿದರೆ ಎಲ್ಲ ಮಕ್ಕಳೂ ಪರೀಕ್ಷಾ ಸಿದ್ಧತೆಯನ್ನೇ ನಡೆಸಿ, ನಂತರದ ದಿನಗಳಲ್ಲಿ ಮೌಲ್ಯಾಂಕನದಲ್ಲಿ ಉತ್ತಮ ಸಾಧನೆ ತೋರುತ್ತಾರೆ ಎಂದು ನಂಬುವುದು ಹೇಗೆ?
ವಿವಿಧ ಹಿನ್ನೆಲೆಗಳಿಂದ ಬರುವ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಕರ ಬಳಿಯಿದ್ದಾಗ ಮಾತ್ರ ಅವರಿಂದ ಒಳ್ಳೆಯ ಕಲಿಕಾ ಸಾಧನೆಯನ್ನು ನಿರೀಕ್ಷಿಸಲು ಸಾಧ್ಯ. ಖಾಸಗಿ ಶಾಲೆಗಳ ಮಕ್ಕಳಿಗಾದರೆ ವಿದ್ಯಾವಂತ ತಂದೆ- ತಾಯಿ ಇರಬಹುದು. ಅವರು ತಮ್ಮ ಮಕ್ಕಳನ್ನು ಈ
ರಜಾ ಅವಧಿಯಲ್ಲಿ ಪರೀಕ್ಷೆಗಾಗಿ ಓದಿಸಬಹುದು. ಆದರೆ ಎಷ್ಟು ಸರ್ಕಾರಿ ಶಾಲಾ ಮಕ್ಕಳು ಈ ಭಾಗ್ಯ ಹೊಂದಿದ್ದಾರೆ?
ಇದರಿಂದ, ಸಾಮಾನ್ಯ ಮೌಲ್ಯಾಂಕನಕ್ಕಾಗಿ ವ್ಯಯಿಸಿದ ಶ್ರಮ, ಹಣ ವ್ಯರ್ಥವಾಗಿ ಫಲಿತಾಂಶ ಅವೈಜ್ಞಾನಿಕವಾಗುತ್ತದೆ. ಹೀಗಾಗಿ, 7ನೇ ತರಗತಿಗೂ ಮೌಲ್ಯಾಂಕನವನ್ನು ಕೈಬಿಟ್ಟು, 6ನೇ ತರಗತಿವರೆಗೆ ಈ ವರ್ಷದ ಫಲಿತಾಂಶವನ್ನು ನಿರ್ಧರಿಸುತ್ತಿರುವ ವಿಧಾನವನ್ನೇ ಅನ್ವಯಿಸಬೇಕು.
ಶುಭಾ ಎ.ಆರ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.