ADVERTISEMENT

ಆಗುಂಬೆ: ಸುರಕ್ಷತೆ ಅಗತ್ಯ

ಎಸ್.ಎನ್.ಅಮೃತ ಪುತ್ತೂರು
Published 8 ಏಪ್ರಿಲ್ 2019, 18:30 IST
Last Updated 8 ಏಪ್ರಿಲ್ 2019, 18:30 IST

ಆಗುಂಬೆ ಘಾಟಿಯಲ್ಲಿ ಈಗಿನ ದಿನಗಳಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದೆ. ಈ ಘಾಟಿಯು ಭಾರಿ ವಾಹನಗಳ ಸಂಚಾರ ತಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಈ ಘಾಟಿಯಲ್ಲಿ ಕಾರು, ಮಿನಿ ಬಸ್ ಅಥವಾ ಲಘು ವಾಹನಗಳ ಸಂಚಾರ ಮಾತ್ರ ಇರಬೇಕು ಎಂದು ಸಾರಿಗೆ ಮತ್ತು ಲೋಕೋಪಯೋಗಿ ಇಲಾಖೆಗಳು ನಿಯಮ ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಕಡಿದಾದ ತಿರುವುಗಳಲ್ಲಿ ಆಗಾಗ ಅವಘಡಗಳು ಸಂಭವಿಸುತ್ತಿವೆ. ಹತ್ತು ಟನ್‌ಗಳಿಗಿಂತಲೂ ಹೆಚ್ಚು ಭಾರ ಹೊತ್ತ ಘನವಾಹನ ಸಂಚಾರವನ್ನು ರಾತ್ರಿ ವೇಳೆ ಸಂಪೂರ್ಣ ನಿಷೇಧಿಸಬಾರದೇ? ಒಣಗಿ ಬಾಗಿದ ಮರಗಳ ರೆಂಬೆಕೊಂಬೆ ಕಡಿಯಬೇಕು. ಆಗುಂಬೆ ಘಾಟಿ ರಸ್ತೆಯನ್ನು ಸುರಕ್ಷಿತಗೊಳಿಸಲು ಉಡುಪಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಬೇಕು. ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೂ ಈ ರಸ್ತೆಯನ್ನು ಪರಿಶೀಲಿಸಿ ಸೂಕ್ಷ್ಮ ಪರಿಸರ, ಅರಣ್ಯ ಪ್ರದೇಶದ ರಕ್ಷಣೆಗೆ ಕ್ರಮ ಜರುಗಿಸಲಿ. ಶಾಶ್ವತ, ಸುರಕ್ಷಿತ ರಸ್ತೆ ನಿರ್ಮಾಣ–ನಿರ್ವಹಣೆ ಇಂದಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT