ADVERTISEMENT

ಬೇಕಾಗಿದೆ ಸಹಿಷ್ಣುತೆ– ಸಮ್ಮಿಲನದ ರಸ್ತೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 15:54 IST
Last Updated 3 ಅಕ್ಟೋಬರ್ 2022, 15:54 IST
   

ಒಂದೂರಲ್ಲಿ ಇಬ್ಬರು ಸಹೋದರರು ಅಕ್ಕಪಕ್ಕದ ಹೊಲಗಳಲ್ಲಿ ಸಹಕಾರದೊಂದಿಗೆ ಉಳುಮೆ ಮಾಡಿಕೊಂಡಿರುತ್ತಾರೆ. ಮುಂದೆ ಅವರಿಬ್ಬರ ನಡುವೆ ಉಂಟಾದ ಭಿನ್ನಾಭಿಪ್ರಾಯವು ಸಂಘರ್ಷಕ್ಕೆ ತಿರುಗುತ್ತದೆ. ಸಹೋದರನೊಬ್ಬ ಬಡಗಿಯ ಮೂಲಕ ತಮ್ಮ ಹೊಲಗಳ ಮಧ್ಯ ಬೇಲಿ ಹಾಕಿಸಲು ಮುಂದಾಗುತ್ತಾನೆ. ಬಡಗಿ ತನ್ನ ಕೆಲಸಕ್ಕೆ ಅಣಿಯಾಗುವ ಮುನ್ನ, ಸಹೋದರರ ಮಧ್ಯೆ ಗತಿಸಿದ ಕೆಟ್ಟಗಳಿಗೆಯನ್ನು ಅರಿತು, ಬೇಲಿ ಕಟ್ಟುವ ಬದಲು ಸೇತುವೆ ನಿರ್ಮಿಸುತ್ತಾನೆ. ಆಗ ಸಹೋದರರಲ್ಲಿನ ಕಲ್ಲಿನಂತಹ ಮನಸ್ಸಿನ ಗೋಡೆಗಳು ಕ್ಷಣಾರ್ಧದಲ್ಲಿ ಉರುಳಿ ಹೋಗುತ್ತವೆ.

ಈ ಸಣ್ಣ ಕಥೆ ಎಲ್ಲ ಕಾಲಕ್ಕೂ ಪ್ರಸ್ತುತ ಎನ್ನುವುದಕ್ಕೆ ಮೈಸೂರು ಜಿಲ್ಲೆಯ ಬದನವಾಳು ಗ್ರಾಮದಲ್ಲಿ, ಎರಡು ಸಮುದಾಯಗಳ ಮಧ್ಯೆ ಗಲಭೆಯಿಂದಾಗಿ 29 ವರ್ಷಗಳಿಂದ ಇದ್ದ ವೈಮನಸ್ಸಿನ ಗೋಡೆಯನ್ನು ಒಡೆದು, ಮನಸ್ಸುಗಳನ್ನು ಬೆಸೆಯಲು ‘ಭಾರತ್‌ ಜೋಡೊ’ ರಸ್ತೆಯನ್ನು ನಿರ್ಮಿಸಿರುವುದು (ಪ್ರ.ವಾ., ಅ. 3) ಶ್ಲಾಘನೀಯ. ನಾವೆಲ್ಲರೂ ಆ ಬಡಗಿಯ ಮನಃಸ್ಥಿತಿಯಂತೆ ಪರಸ್ಪರ ಸಮುದಾಯಗಳಾದ್ಯಂತ ಸಹಿಷ್ಣುತೆ ಮತ್ತು ಸಮ್ಮಿಲನ ಮನೋಭಾವದ ರಸ್ತೆಯನ್ನು ನಿರ್ಮಿಸಿದಾಗ ಮಾತ್ರ, ನಮ್ಮ ವೈವಿಧ್ಯಮಯ ಸಮುದಾಯಗಳ ನಡುವೆ ಶಾಶ್ವತವಾದ ಸಾಮರಸ್ಯ ಸಾಧ್ಯವಾಗುತ್ತದೆ. ಇದು, ಮನುಕುಲದಲ್ಲಿ ಏಕತೆಯನ್ನು ರೂಪಿಸಲು ಇರುವ ಏಕೈಕ ಮಾರ್ಗ.

–ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.