ಬೀದರ್ ಜಿಲ್ಲೆಯ ಗಂಗನಬಿಡ ಎಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಶಿಥಿಲಗೊಂಡಿದ್ದು, ಶಿಕ್ಷಕರು ಬಯಲಲ್ಲೇ ಪಾಠ ಮಾಡುತ್ತಿರುವುದು ಚಿತ್ರಸಹಿತ ವರದಿಯಾಗಿದೆ (ಪ್ರ.ವಾ., ಜುಲೈ 3). ಇದು, ಗಂಗನಬಿಡ ಗ್ರಾಮದ ಸರ್ಕಾರಿ ಶಾಲೆಯ ದುಃಸ್ಥಿತಿ ಮಾತ್ರವಲ್ಲ, ಗ್ರಾಮೀಣ ಭಾಗದ ಅನೇಕ ಸರ್ಕಾರಿ ಶಾಲೆಗಳ ಸ್ಥಿತಿ ಹೀಗೇ ಇದೆ. ಶಿಕ್ಷಣ ಕ್ಷೇತ್ರದ ಸುಸ್ಥಿತಿಯನ್ನು ಸರ್ಕಾರ ಮತ್ತು ಸಾರ್ವಜನಿಕರುಆದ್ಯತೆಯಾಗಿ ಪರಿಗಣಿಸ ಬೇಕಾಗಿತ್ತು. ಆದರೆ ನಮ್ಮಲ್ಲಿ ಅದು ಕಡೆಗಣನೆಗೆ ಒಳಗಾಗಿದೆ. ಶಾಲೆಗೆ ಸಂಬಂಧಿಸಿದ ಕೆಲವು ಮೂಲ ಸಮಸ್ಯೆಗಳನ್ನು, ಮುಖ್ಯೋಪಾಧ್ಯಾಯರು ಸಮರ್ಥರಾಗಿದ್ದರೆ ಪರಿಹರಿಸಲು ಸಾಧ್ಯ. ಆದರೆ ಶಾಲೆ ಇರುವುದು ಹಳ್ಳಿಯಲ್ಲಿ, ಮುಖ್ಯೋ ಪಾಧ್ಯಾಯರ ವಾಸ ಪಟ್ಟಣದಲ್ಲಿ ಎಂಬಂತಾಗಿದೆ. ಯಾಂತ್ರಿಕವಾಗಿ ಶಾಲೆಗೆ ಬಂದು ಹೋಗುವ ಮುಖ್ಯೋಪಾಧ್ಯಾಯ ರಿಂದ ಶಾಲೆಯ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡುವ ಔದಾರ್ಯ ನಮ್ಮಲ್ಲಿ ಕಡಿಮೆ. ಶಾಲೆಯ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಲು ಮತ್ತು ಅನುದಾನ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಡುವ ಅಧಿಕಾರಿಗಳು ಇರುವಾಗ, ಶಾಲೆಯ ಅಭಿವೃದ್ಧಿ ಹೇಗೆ ಸಾಧ್ಯ? ಇವೆಲ್ಲದರ ಪರಿಣಾಮವಾಗಿ, ಕೆಲವು ಹಳ್ಳಿಗಳ ಮಣ್ಣಿನ ಮಕ್ಕಳಿಗೆ ಶಾಲೆಯ ಬಯಲಿನ ಮಣ್ಣನ್ನು ಬಿಟ್ಟು ತರಗತಿಯ ಒಳಗೆ ಬೆಂಚಿನ ಮೇಲೆ ಕುಳಿತುಕೊಂಡು ಪಾಠ ಕೇಳುವ
ಸೌಭಾಗ್ಯವಂತೂ ಇಲ್ಲ.
– ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.