ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ನಾಲ್ಕನೇ ಬಾರಿ ಅಧಿಕಾರಕ್ಕೆ ಬಂದಿದೆ. ಇಷ್ಟು ಸಾಲದೆ, ದೇಶದ ವಿವಿಧೆಡೆ ನಡೆದ ಉಪ ಚುನಾವಣೆಗಳಲ್ಲೂ ಬಿಜೆಪಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಎಂಬ ಆರೋಪ ಇದೆಯಾದರೂ ಅದೊಂದು ಕಾರಣಕ್ಕೆ ಮಾತ್ರ ಇಲ್ಲಿ ಬಿಜೆಪಿ ಗೆದ್ದಿಲ್ಲ. ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮೊದಲೇ ಬಹಳಷ್ಟು ಸಿದ್ಧತೆ ಮಾಡಿಕೊಂಡಿದ್ದುದು ಅವರ ಗೆಲುವಿಗೆ ಕಾರಣ ಎನಿಸುತ್ತದೆ. ಅಷ್ಟೇ ಅಲ್ಲ, ಮುನಿರತ್ನ ಅವರು ಜನರೊಡನೆ ಬೆಸೆದುಕೊಂಡಿದ್ದದ್ದೂ ಗಮನಾರ್ಹ.
ಹಿಂದೆ ಕಾಂಗ್ರೆಸ್ ಪಕ್ಷದ ಚಿಹ್ನೆ ಮೇಲೆ ನಿಂತ ಯಾರಾದರೂ ಗೆಲ್ಲುತ್ತಿದ್ದರು. ಈಗ ಬಿಜೆಪಿಯಲ್ಲಿ ಅದೇ ಸ್ಥಿತಿ ಇದ್ದಂತಿದೆ. ಕೆಲವು ಅಭ್ಯರ್ಥಿಗಳ ವಿಚಾರದಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗದಂತಹ ಆಪಾದನೆಗಳಿದ್ದರೂ ಇವೆಲ್ಲ ಮತದಾರರಿಗೆ ತಿಳಿದಿದ್ದರೂ ಚುನಾವಣೆಯಲ್ಲಿ ಅವೆಲ್ಲ ನಗಣ್ಯವಾಗುತ್ತಿವೆ. ಪಕ್ಷವನ್ನು, ನಾಯಕತ್ವವನ್ನು ಬೆಳೆಸುವುದಕ್ಕೆ, ಪಕ್ಷದಲ್ಲಿ ಮೌಲ್ಯಾಧಾರಿತ ಆಶಯಗಳನ್ನು ಬೆಳೆಸುವುದಕ್ಕೆ ಕಾಂಗ್ರೆಸ್ ನಾಯಕರು ಪ್ರಾಮುಖ್ಯ ಕೊಟ್ಟಿಲ್ಲ. ವ್ಯಕ್ತಿಯ ವರ್ಚಸ್ಸನ್ನು ಗಣನೆಗೆ ತೆಗೆದುಕೊಳ್ಳದೆ ಕೆಲವರನ್ನು ನೇಪಥ್ಯಕ್ಕೆ ಸರಿಸಲಾಗಿದೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್, ಬಿಹಾರದಲ್ಲಿ ತೇಜಸ್ವಿ ಯಾದವ್ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿ, ಮೆಚ್ಚುಗೆಗೆ ಪಾತ್ರರಾದರು. ಕ್ಷೇತ್ರಗಳಲ್ಲಿ ಜನರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸದೆ, ಚುನಾವಣೆ ಬಂದಾಗ ಮಾತ್ರ ಎಚ್ಚೆತ್ತುಕೊಂಡರೆ ಗೆಲ್ಲಲು ಸಾಧ್ಯವೇ?
–ಕೆ.ಎನ್.ಭಗವಾನ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.