ಬಿಹಾರದಲ್ಲಿ ನಡೆದಿರುವ ರಾಜಕೀಯ ಮೇಲಾಟವನ್ನು ನೋಡಿದಾಗ, ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನೂ ಅಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಧಿಕಾರ ಹಿಡಿಯಲು ಸಂಖ್ಯೆಯೊಂದು ಮಾನದಂಡವೇ ಅಲ್ಲ ಎಂಬಂತಾಗಿದೆ. ದೊಡ್ಡ ಪಕ್ಷಗಳು ಮತ್ತೊಂದು ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಕಡಿಮೆ ಶಾಸಕರನ್ನು ಹೊಂದಿರುವ ಪಕ್ಷಕ್ಕೆ ಅವಮಾನ ನುಂಗಿ ಬೆಂಬಲ ನೀಡುತ್ತಿರುವುದು ವಿಪರ್ಯಾಸದ ಸಂಗತಿ. ಮತ ನೀಡಿದ ಮಹನೀಯರು ಬೆಪ್ಪಾಗಿ, ರಾಜಕೀಯ ಅಟಾಟೋಪಗಳನ್ನು ನೋಡುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ.
ಇಂತಹ ವಿದ್ಯಮಾನಗಳು ಸಾಮಾನ್ಯ ಎಂಬಂತಾಗಿಹೋಗಿವೆ. ಈಗೇನಿದ್ದರೂ ಅಂಕೆ ಸಂಖ್ಯೆಗಳ (ಕು)ತಂತ್ರದ್ದೇ ಆಟ. ಇನ್ನು ನೈತಿಕತೆಗೆ ನೆಲೆ ಎಲ್ಲಿ? ನೈತಿಕತೆಯಿಲ್ಲದ ಪ್ರಜಾಪ್ರಭುತ್ವ ಇದ್ದರೂ ಹೆಸರಿಗಷ್ಟೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಜಾಪ್ರತಿನಿಧಿಗಳ ನೈತಿಕತೆಯ ಮಟ್ಟವನ್ನು ಹೆಚ್ಚಿಸುವ ಕುರಿತು ವ್ಯಾಪಕ ಚರ್ಚೆ ನಡೆಯಬೇಕಾಗಿದೆ. ಪ್ರಜಾಪ್ರಭುತ್ವವು ಹಸಿದ ಹದ್ದುಗಳ ಆಹಾರವಾಗದೆ ಸರ್ವರಿಗೂ ಸಮಾನ ನ್ಯಾಯ ದೊರಕಲಿ.
ಸರೋಜಿನಿ ನಾಯಕ್,ಆಶೀಹಾಳ ತಾಂಡಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.