ಸಿದ್ದರಾಮಯ್ಯನವರ ಇತ್ತೀಚಿನ ಮಾತು (ಪ್ರ.ವಾ., ಮೇ 29) ಓದಿದೆ. ವಿಷಯಗಳನ್ನು ಬೆರೆಸುವುದು ರಾಜಕಾರಣಿಗಳ ಹಳೇ ತೆವಲು. ಪಠ್ಯಪುಸ್ತಕ, ಆರ್ಎಸ್ಎಸ್, ನೆಹರೂ, ಕುವೆಂಪು ಇವುಗಳ ಮಧ್ಯೆ ಆರ್ಯ- ದ್ರಾವಿಡ ಏಕೆ ಬಂತೋ ಗೊತ್ತಾಗುತ್ತಿಲ್ಲ. ಆರ್ಯನ್ ಖಾನ್- ರಾಹುಲ್ ದ್ರಾವಿಡ್ ಅವರನ್ನೂ ಎಳೆದುತಂದರೆ ಆಶ್ಚರ್ಯವಿಲ್ಲ! ದ್ರಾವಿಡರು ಭಾರತದ ಮೂಲನಿವಾಸಿಗಳು, ಆರ್ಯರು ಹೊರಗಿನಿಂದ ವಲಸೆ ಬಂದವರು ಎಂಬ ಹಳೆಯ ಪಠ್ಯಪುಸ್ತಕದ ಕಥನಕ್ಕೆ ಕೆಲವು ಪುರಾತತ್ವಶಾಸ್ತ್ರಜ್ಞರು, ಇತಿಹಾಸ ಅಧ್ಯಯನಕಾರರು ಸವಾಲು ಎಸೆದಿದ್ದಾರೆ.
ಆರ್ಯ ಪದಕ್ಕೆ ಗೌರವಾರ್ಹ ಎಂಬುದರ ಜತೆಗೆ ಬೇರೆ ಅರ್ಥಗಳೂ ಇವೆ. ಆರ್ಯಪುತ್ರ ಪತಿಯನ್ನು ಸಂಬೋಧಿಸುವ ಪರಿಯಾಗಿತ್ತು. ಆರ್ಯಾವರ್ತ ಹಿಮಾಲಯದಿಂದ ಹಿಡಿದು ವಿಂಧ್ಯ ಪರ್ವತಗಳವರೆಗಷ್ಟೆ ಇತ್ತು. ಆರ್ಯ, ಆರಾಧ್ಯ ಒಂದು ಪಂಗಡ (ಸರ್ನೇಮ್) ಕೂಡ. ಮಾನವನ ಜೀನೋಮ್ ಪೂರ್ಣ ಡೀಕೋಡ್ ಆಗಿದ್ದು ಕಳೆದ ವರ್ಷವಷ್ಟೆ. ಈ ಬಗೆಯ ವಿಶ್ಲೇಷಣೆ ಸಿಂಧೂ ಕಣಿವೆ ನಾಗರಿಕತೆಯ ಬಗೆಗಿದ್ದ ಕೆಲವು ಕಲ್ಪನೆಗಳನ್ನು ಮರುಪರಿ ಶೀಲಿಸಲು ಪ್ರೇರೇಪಿಸಿದೆ. ದಾಖಲಿತ ಇತಿಹಾಸದಲ್ಲೂ ತೆರಪುಗಳು ಇರುತ್ತವೆ. ಉದಾಹರಣೆಗೆ, ಮೌರ್ಯ ಹಾಗೂ ಗುಪ್ತರ ಕಾಲದ ನಡುವೆ ಡೆಕ್ಕನ್ (ದಖ್ಖನ್) ಅರಸರು ಪ್ರಬಲರಾಗಿದ್ದುದು ಹೈಲೈಟ್ ಆಗಿಲ್ಲ. ಒಟ್ಟಾರೆ ಇಂತಹ ಐಡೆಂಟಿಟಿ ಚಾಲೆಂಜ್ಗಳನ್ನು ರಾಜಕಾರಣಿಗಳು ಯಾವುದೋ ಬೇರೆ ವಿವಾದಗಳ ನಡುವೆ ತರುವುದು ತರವಲ್ಲ.
-ಎಚ್.ಎಸ್.ಮಂಜುನಾಥ, ಗೌರಿಬಿದನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.