‘ಕ್ಷಮಿಸಿ! ಹಿಂದುತ್ವ ಬೇರೆ ಹಿಂದೂಧರ್ಮ ಬೇರೆ’ (ಪ್ರ.ವಾ., ಜೂನ್ 21) ಲೇಖನದಲ್ಲಿ ಪ್ರಸನ್ನ ಅವರು ಹಿಂದೂಧರ್ಮವೆಂಬ ಸೂರ್ಯನಿಗೆ ಜಾತೀಯತೆಯೆಂಬ ಅಪ್ಪಟ ದೇಸಿ ಗ್ರಹಣ ಹಿಡಿದಿರುವುದರಿಂದಾಗಿ ಅದರ ‘ಪ್ರಖರತೆ’ ಮಾಸಿದೆ, ಈ ಗ್ರಹಣದ ಸಂಧಿಯಲ್ಲಿ ಉಗ್ರ ಹಿಂದುತ್ವವು ಅವತರಿಸಿದೆಯೆಂದೂ ಇದನ್ನು ಹದ್ದುಬಸ್ತಿನಲ್ಲಿಡಲು ‘ಮೃದು ಹಿಂದುತ್ವವಾದಿ’ಗಳನ್ನು ಮುಖ್ಯವಾಹಿನಿಗೆ ತರಬೇಕೆಂದೂ ವಾದಿಸಿದ್ದಾರೆ. ಇದು ಅರೆಬರೆ ಮಾಹಿತಿಗಳನ್ನು ಮುಂದಿಟ್ಟುಕೊಂಡು ಅರ್ಥೈಸಲಾಗಿರುವ ಲೇಖನ.
ಇತರ ಧಾರ್ಮಿಕ ಮೂಲಭೂತವಾದಗಳಿಗೆ ಇರುವಂತೆಯೇ ಹಿಂದುತ್ವವಾದದ ಅವತರಣದ ಹಿಂದೆಯೂ ಅದರದ್ದೇ ಆದ ಆರ್ಥಿಕ- ರಾಜಕೀಯ ಅಜೆಂಡಾ ಇದೆ ಎಂಬುದನ್ನು ಪ್ರಸನ್ನ ಅವರು ಸರಿಯಾಗಿ ಗ್ರಹಿಸಿಯೇ ಇಲ್ಲ. ಆದ್ದರಿಂದಲೇ ಅವರು ಆರ್ಎಸ್ಎಸ್ನ ‘ಹಿಂದೂ ರಾಷ್ಟ್ರ ನಿರ್ಮಾಣ’ದ ಸ್ಪಷ್ಟ ಕಾರ್ಯಸೂಚಿಯನ್ನು ಚರ್ಚೆಯಿಂದ ಹೊರಗಿಟ್ಟಿದ್ದಾರೆ.
‘ಮೋದಿವಾದ’ವೆಂಬ ನುಡಿಗಟ್ಟೊಂದನ್ನು ಸೃಷ್ಟಿಸಿ, ಅದನ್ನು ಪ್ರತ್ಯೇಕ ವಿದ್ಯಮಾನವೆಂಬಂತೆ ಬಿಂಬಿಸುತ್ತಾ, ಆರ್ಎಸ್ಎಸ್ಗಿಂತ ಅದು ಅಪಾಯಕಾರಿ ಎಂದು ಹೇಳಿರುವ ಪ್ರಸನ್ನ ಅವರ ಮಾತುಗಳು ‘ಮರಗಳನ್ನು ತೋರಿಸುತ್ತಾ ಅರಣ್ಯವನ್ನು ಮರೆಮಾಚುವ’ ಉದ್ದೇಶಕ್ಕೆ ಪಕ್ಕಾದಂತಿವೆ! ಜಾತಿವಾದದ ಅಪಾಯವನ್ನು ಎತ್ತಿ ತೋರಿಸುವ ಭರದಲ್ಲಿ ಪ್ರಸನ್ನರಿಗೆ ಮೃದು ಹಿಂದುತ್ವದ ಗ್ರಹಣ ಹಿಡಿದಿರುವುದು ನಿಜಕ್ಕೂ ದುರಂತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.