‘ಬೆಳೆ ವಿಮೆಗೆ ಮಧ್ಯವರ್ತಿಗಳ ಕನ್ನ’ (ಪ್ರ.ವಾ., ಜುಲೈ 10) ಓದಿ, ವರ್ಷಗಳ ಹಿಂದೆ ಎಂ.ಎಸ್.ಕೆ.ಪ್ರಭು ಅವರು ಪ್ರಸ್ತಾಪಿಸಿದ್ದ ‘ಒಂದೇ ಎಮ್ಮೆಯನ್ನು ಬ್ಯಾಂಕ್ ಸಾಲದಿಂದ 28 ಜನ ಕೊಂಡ ಗುಂಡಮಾರನಹಳ್ಳಿ ಕತೆ’ಯ (‘ವಿರೋಧ ವಿಲಾಸ’, 1999) ನೆನಪಾಯಿತು. ಅಲ್ಲಿಯ ದಲ್ಲಾಳಿ ₹ 3,000 ಸಾಲ ಕೊಡಿಸಲು ₹ 1,000 ಪಡೆಯುವುದಲ್ಲದೆ, ಎಮ್ಮೆ ಸತ್ತಿದೆ ಎಂದು ಸರ್ಟಿಫಿಕೇಟ್ ಮಾಡಿಸಿ ಕ್ಲೈಮ್ನಲ್ಲೂ ಪಾಲು ಸ್ವೀಕರಿಸುವ ಚಾಣಾಕ್ಷ. ಈಗ ‘ಮೌಲ್ಯ’ಗಳು ಹೆಚ್ಚಿವೆ, ಒಂದೇ ಪ್ರಕರಣದಲ್ಲಿ ಐದು ಲಕ್ಷ ರೂಪಾಯಿ ಸಿಗುವ ಸ್ಥಿತಿ!
ರೋಗ ಬಾರದೆ, ಫಸಲು ನಾಶವಾಗದೆ ಪರಿಹಾರ ಮೊತ್ತ ಸಿಗುವ ಹಾಗೂ ಕಷ್ಟಪಟ್ಟು ಪ್ರೀಮಿಯಂ ಕಟ್ಟಿ- ನಿಜಕ್ಕೂ ಬೆಳೆ ನಷ್ಟವಾದಾಗಲೂ- ಕ್ಲೈಮ್ ಸಿಗದ ಪ್ರಕರಣಗಳನ್ನು ಪತ್ರಿಕಾ ವರದಿಗಳು ಪ್ರಸ್ತಾಪಿಸಿವೆ (ಜಿಲ್ಲೆ, ಬೆಳೆ, ವಿಮಾ ಯೋಜನೆ ಬೇರೆ ಇರಬಹುದು). ನಷ್ಟ ಅಂದಾಜಿನ ಘಟಕ ಗ್ರಾಮ ಆದರೂ ಎರಡು ಜಮೀನುಗಳ ಬೆಳೆ ನಷ್ಟ ಬೇರೆ ಇರಲು ಸಾಧ್ಯ. ಹಿಡುವಳಿ, ಬೆಳೆ ಇಟ್ಟ ಕ್ಷೇತ್ರ ದಾಖಲಿಸಲು‘ಆ್ಯಪ್’ ಬಳಸಲಾಗುತ್ತಿದೆ. ಆದರೆ ಒಬ್ಬ ರೈತ ವಿಫಲ ಅಥವಾ ನಷ್ಟ ಆದ ಬೆಳೆಯ ವಿಡಿಯೊ ಸಿದ್ಧಪಡಿಸಿ ಸರ್ಕಾರಿ ಅಧಿಕಾರಿಗಳಿಗೆ ಸತ್ಯಾಪನ ಮಾಡಲು ಕೇಳಿದರೆ ಅವರು ಒಪ್ಪುವರೇ? ವಿಮಾ ಕಂಪನಿ ಈ ಬಗೆಯ ವೈಯಕ್ತಿಕ ಸಾಕ್ಷ್ಯವನ್ನು ದಾವೆ ನಿರ್ಧರಿಸಲು ಬಳಸುವುದೇ?
ಎಚ್.ಎಸ್.ಮಂಜುನಾಥ,ಗೌರಿಬಿದನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.