‘ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ. ನನಗೆ ಕುರ್ಚಿಯ ವ್ಯಾಮೋಹವಿಲ್ಲ. ನಾನು ಕೇವಲ ಸಾಂದರ್ಭಿಕ ಶಿಶು’ ಎಂಬ ಮಾತನ್ನು ಮುಖ್ಯಮಂತ್ರಿ ಒಂದೆಡೆ ಹೇಳಿದ್ದಾರೆ. ಮತ್ತೊಂದು ಕಡೆ, ಸರ್ಕಾರವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿ, ವಿಶ್ವಾಸಮತ ಪ್ರಕ್ರಿಯೆಯನ್ನು ಎಳೆದಾಡತೊಡಗಿದ್ದಾರೆ. ಆ ಮಾತು ಮತ್ತು ಈ ನಡೆ ನಡುವೆ ವಿರೋಧಾಭಾಸ ಇಲ್ಲವೇ!? ಸದನದ ಕಲಾಪವನ್ನು ನಾವೆಲ್ಲಾ ಕುತೂಹಲದಿಂದ ವೀಕ್ಷಿಸಿದ್ದೇ ವೀಕ್ಷಿಸಿದ್ದು. ಆದರೆ, ತಾರ್ಕಿಕ ಅಂತ್ಯ ಮುಟ್ಟಲೇ ಇಲ್ಲ.
ಸದನದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ವರ್ತಿಸುತ್ತಿದ್ದ ಜನಪ್ರತಿನಿಧಿಗಳು, ಮೊನ್ನೆಯಂತೂ ತಾವೂ ಮಾತನಾಡಬೇಕು ಎಂದು ಅತಿ ಉತ್ಸಾಹ ತೋರಿ, ಚರ್ಚೆ– ಗದ್ದಲದಲ್ಲಿ ಪಾಲ್ಗೊಂಡಿದ್ದು ವಿಶೇಷ. ರಾಜ್ಯಪಾಲರ ಆದೇಶಕ್ಕೆ ಮನ್ನಣೆ ದೊರೆಯಲಿಲ್ಲ. ಒಟ್ಟಿನಲ್ಲಿ, ಪ್ರಜಾತಂತ್ರದ ಈ ಪ್ರಹಸನವನ್ನು, ಮೈತ್ರಿ ಸರ್ಕಾರದ ಹಗ್ಗಜಗ್ಗಾಟವನ್ನು ಪ್ರಜೆಗಳು ಅಸಹಾಯಕರಾಗಿ, ಮೂಕಪ್ರೇಕ್ಷಕರಾಗಿ ನೋಡಬೇಕಾಗಿ ಬಂದುದು ಪ್ರಜಾಪ್ರಭುತ್ವದ ದುರಂತ.
ವೀಣಾ ಸುಬ್ರಹ್ಮಣ್ಯ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.