ಯಾವುದೇ ಸಮಾವೇಶ ಅಥವಾ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳಿಗೆ ಶಾಸಕರು, ಅಧಿಕಾರಿಗಳು ಬರುತ್ತಾರೆಂದರೆ ಎಲ್ಲಿಲ್ಲದ ಉತ್ಸಾಹ ಕಂಡುಬರುತ್ತದೆ. ಅಲ್ಲಿ ಜನರು ಸಮಸ್ಯೆಗೆ ಪರಿಹಾರ ಕೇಳಿದಾಗ, ಅವರ ಕೆಲಸ ಖಂಡಿತ ಆಗುತ್ತದೆ ಎಂಬ ಭರವಸೆಯ ಮಾತುಗಳು ಕೇಳಿಬರುತ್ತವೆ. ಆದರೆ ಅವುಗಳಲ್ಲಿ ಕೆಲವು ಕಾರ್ಯರೂಪಕ್ಕೆ ಬಂದರೆ ಇನ್ನು ಕೆಲವು ಹಾಗೇ ಉಳಿದುಬಿಡುತ್ತವೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಚಿಕ್ಕ ಆದಾಪುರ ಗ್ರಾಮದಲ್ಲಿ ‘ಡಿ.ಸಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅವರಿಗೆ ಗ್ರಾಮಸ್ಥರು ಕೆರೆಯ ನೀರನ್ನು ಕುಡಿಯಲು ಕೊಟ್ಟಾಗ ಅವರು, ‘ಇಲ್ಲ, ನಾನು ಬಿಸ್ಲೇರಿ ನೀರು ಕುಡಿದಿದ್ದೇನೆ’ ಎಂದರು. ಏಕೆಂದರೆ, ಹಳ್ಳಿಯ ಕೆರೆಯ ನೀರು ಶುದ್ಧವಾಗಿರಲಿಲ್ಲ. ಹೀಗಿರುವಾಗ ಅಲ್ಲಿ ವಾಸಿಸುವ ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಯೋಚಿಸಬೇಕು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸ್ಥಳೀಯರು ಈ ಹಿಂದೆ ಬೇಡಿಕೆ ಇಟ್ಟಿದ್ದರು. ಆದರೂ ಪ್ರಯೋಜನವಾಗಿಲ್ಲ. ಇಂತಹ ಕಾರ್ಯಕ್ರಮಗಳು ದಿನದ ಸಡಗರವಾಗದೆ ಸ್ಥಳೀಯರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಪೂರಕವಾಗಿ ಇರಬೇಕು.
ಆನಂದ ಜೇವೂರ್,ಕಲಬುರಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.