ಹಸುವಿನ ಹಾಲು ಪ್ರಾಣಿಜನ್ಯ ಆಹಾರವಾದರೂ ಅದು ಪವಿತ್ರವೆಂದೂ ಒಳ್ಳೆಯ ಆಹಾರವೆಂದೂ ನಮ್ಮ ಹಿಂದೂ ಸಮಾಜದ ಪ್ರಭಾವಿ ಜಾತಿಗಳಿಂದ ಘೋಷಿಸಲ್ಪಟ್ಟು, ಅದೇ ಹಾಲನ್ನೇ ಶಿಶುಗಳಿಂದ ವೃದ್ಧರವರೆಗೂ ಉತ್ತಮವಾದ ಆಹಾರವೆಂದು ಸೇವಿಸುತ್ತಿದ್ದೇವೆ. ಹಸುವಿನಿಂದ ಹಾಲನ್ನು ಪ್ರಾಣಿ ಹಿಂಸೆಯಿಂದಾಗಲೀ ಅಥವಾ ರಕ್ತಪಾತದಿಂದಾಗಲೀ ಮಾಂಸವನ್ನು ಪಡೆದಂತೆ ಪಡೆಯುತ್ತಿಲ್ಲ. ಹಸುವಿಗೆ ಒಳ್ಳೆಯ ಹುಲ್ಲು, ಹಿಂಡಿ, ಬೂಸ ತಿನ್ನಿಸಿ, ಅದನ್ನು ತೃಪ್ತಿಪಡಿಸಿ ಹಾಲನ್ನು ಕರೆದುಕೊಳ್ಳುತ್ತೇವೆ. ಅದರಿಂದ ಹಸುವಿಗೆ ಯಾವ ಹಿಂಸೆಯೂ ಆಗುವುದಿಲ್ಲವೆಂಬುದು ಎಲ್ಲರಿಗೂ ಗೊತ್ತು.
ಅದೇ ರೀತಿ ಕೋಳಿಯ ಮೊಟ್ಟೆಯೂ ಪ್ರಾಣಿ(ಪಕ್ಷಿ)ಜನ್ಯ ಆಹಾರ. ಅದನ್ನು ಸಹ ಪ್ರಾಣಿ ಹಿಂಸೆಯಿಂದಾಗಲೀ ರಕ್ತಪಾತದಿಂದಾಗಲೀ ಪಡೆಯುತ್ತಿಲ್ಲ. ಹಿಂಸಾರಹಿತವಾಗಿ ಪಡೆದುಕೊಳ್ಳುತ್ತಿದ್ದೇವೆ. ಹಾಲು ಮತ್ತು ಮೊಟ್ಟೆಯು ಪ್ರಾಣಿ ರಕ್ತದಿಂದ ಉತ್ಪತ್ತಿಯಾಗಿ ನಮಗೆ ದೊರೆಯುತ್ತವೆಯೇ ವಿನಾ ಸಸ್ಯಗಳಿಂದ ಉತ್ಪತ್ತಿಯಾಗಿ ಸಸ್ಯಾಹಾರವಾಗಿಲ್ಲ. ಮೊಟ್ಟೆಯು ಹಾಲಿನಂತೆಯೇ ಸತ್ವವುಳ್ಳ ಪರಿಪೂರ್ಣವಾದ ಆಹಾರ. ರಕ್ತಹೀನತೆಯುಳ್ಳ ಮಕ್ಕಳಿಗೂ ರೋಗಿಗಳಿಗೂ ವೈದ್ಯರು ಮೊಟ್ಟೆಯನ್ನು ಯೋಗ್ಯ ಆಹಾರವೆಂದು ತಿನ್ನಲು ಪ್ರೋತ್ಸಾಹಿಸುತ್ತಾರೆ.
ವೈಜ್ಞಾನಿಕ ಜ್ಞಾನವುಳ್ಳ ಮಂದಿ, ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಯನ್ನು ಕೊಡುವುದರ ಪರವಾಗಿ ವಾದಿಸುತ್ತಿದ್ದಾರೆ.
ಆದರೆ, ಸ್ವಾಮೀಜಿಗಳು ಕೆಲವರು ಸರಿಯಾದ ಕಾರಣ ತಿಳಿಸದೆ, ಮಕ್ಕಳಿಗೆ ಮೊಟ್ಟೆಯನ್ನು ಕೊಡಬಾರದೆಂದು ಪಟ್ಟು ಹಿಡಿದಿದ್ದಾರೆ. ಮೊಟ್ಟೆಯನ್ನು ಕೊಡಬಾರದೆಂದು ಹೇಳುವವರಿಗೆ, ಹಸುವಿನ ರಕ್ತದಿಂದ ಉತ್ಪತ್ತಿಯಾಗಿ ಬಂದ ಹಸುವಿನ ಹಾಲನ್ನೂ ಕೊಡಬಾರದೆಂದು ಗಟ್ಟಿಯಾಗಿ ಹೇಳಬೇಕಾಗುತ್ತದೆ.
– ಸಿ.ಮುತ್ತುರಾಯಪ್ಪ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.