ADVERTISEMENT

ಬೇಡಿಕೆಗೆ ತಕ್ಕಂತೆ ಪ್ರೋತ್ಸಾಹ ಸಹಜ

ಕೆ.ಎನ್.ಭಗವಾನ್
Published 22 ಫೆಬ್ರುವರಿ 2019, 20:00 IST
Last Updated 22 ಫೆಬ್ರುವರಿ 2019, 20:00 IST

ಪ್ರಜಾವಾಣಿಯ ಟ್ವೀಟ್‌ನಲ್ಲಿ (ಫೆ. 22) ಡಾ. ಜಿ. ಪರಮೇಶ್ವರ ಅವರ ‘ತಾಯ್ನುಡಿಯೇ ಎಲ್ಲ...’ ಎನ್ನುವುದಕ್ಕೆ ವೈದ್ಯ ಹರಿದಾಸ್ ಅವರು ‘... ಹಾಗಿದ್ದರೆ ಕರ್ನಾಟಕದಲ್ಲಿ ಯಾಕೆ ಇಂಗ್ಲಿಷ್ ಮಾಧ್ಯಮವನ್ನು ಬೆಂಬಲಿಸುತ್ತಿದ್ದೀರಿ?' ಎಂದು ಕೇಳಿದ್ದಾರೆ.

ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಹೆಚ್ಚು ಮುಂದುವರಿದಿರುವುದಕ್ಕೆ ಇಂಗ್ಲಿಷ್ ಪ್ರಮುಖ ಕಾರಣ. ಹಿಂದೆ ಇಂಗ್ಲಿಷ್ ಪರಕೀಯ ಭಾಷೆಯಾಗಿತ್ತು. ಈಗ, ಅದು ಇಡೀ ಭಾರತದಲ್ಲಿ ‘ಹೆಚ್ಚಿನಜನರು ಸ್ವಲ್ಪವಾದರೂ ಅಳವಡಿಸಿಕೊಂಡಿರುವ, ಅಭ್ಯಾಸವಾಗಿಹೋಗಿರುವ ಭಾಷೆಯಾಗಿದೆ’. ಮಾತೃಭಾಷೆ ಅವಶ್ಯಕವಾಗಿ ಇರಲೇಬೇಕು. ಆದರೆ, ಇಂಗ್ಲಿಷ್‌ ಇಲ್ಲದಿದ್ದರೆ ಉದ್ಯೋಗಕ್ಕೆ, ಬದುಕಿಗೆ ತೊಂದರೆ ಎನ್ನುವ ಮಟ್ಟಿಗೆ ಅದು ಆಡುಭಾಷೆಯಾಗಿದೆ.

ಕರ್ನಾಟಕದಲ್ಲೇ ಒಂದು ವಾಕ್ಯದಲ್ಲಿ ಇಂಗ್ಲಿಷ್ ಪದವಿಲ್ಲದೇ ಮಾತನಾಡುವವರ ಸಂಖ್ಯೆ ಕಡಿಮೆ. ಶತಮಾನಗಳ ಹಿಂದೆ ಸಂಸ್ಕೃತ, ಪಾಳಿ, ಲ್ಯಾಟಿನ್, ಪರ್ಷಿಯನ್ ಮುಂತಾದ ಭಾಷೆಗಳು ಬಹಳ ಬಳಕೆಯಲ್ಲಿದವು. ಈ ಶತಮಾನದಲ್ಲಿ, ಇಡೀ ವಿಶ್ವದಲ್ಲಿ ವೈದ್ಯಕೀಯ, ತಾಂತ್ರಿಕ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇಂಗ್ಲಿಷ್ ಭಾಷೆ ಮೊದಲನೆಯ ಸ್ಥಾನದಲ್ಲಿದೆ. ಇದೇ ಕಾರಣಕ್ಕೆ, ಚೀನಾ, ಡೆನ್ಮಾರ್ಕ್ ಮತ್ತು ಯುರೋಪ್ ದೇಶಗಳಲ್ಲೂ ಇಂಗ್ಲಿಷ್ ಕಲಿಯುವುದಕ್ಕಾಗಿ ಸರ್ಕಾರಗಳು ಉತ್ತೇಜನ ಕೊಡುತ್ತಿವೆ. ಇಷ್ಟೇ ಅಲ್ಲ, ಪಂಚೆ, ಪೈಜಾಮ, ಜುಬ್ಬಾಗಳಿಗಿಂತ ವಿದೇಶಿ ಪ್ಯಾಂಟ್, ಶೂ ಜನರನ್ನು ಹೆಚ್ಚು ಆಕರ್ಷಿಸುತ್ತಿವೆ.

ADVERTISEMENT

ಮಾತೃಭಾಷೆಯಲ್ಲಿ ಮಕ್ಕಳಿಗೆ ಚೆನ್ನಾಗಿ ಅರ್ಥವಾಗುತ್ತದೆ ಎನ್ನುವುದು ಒಂದು ವಾದವಷ್ಟೇ. ಮಕ್ಕಳಿಗೆ ಯಾವುದನ್ನು ಹೇಳಿಕೊಟ್ಟರೆ ಅವುಗಳನ್ನು ಕಲಿಯುವ ಪ್ರತಿಭೆ ಇರುತ್ತದೆ. ಉದ್ಯೋಗ ಅವಶ್ಯಕತೆ ಇರುವುದರಿಂದ ಮನುಷ್ಯರಿಗೆ ಆಸಕ್ತಿ ಇರುವ ಮತ್ತು ಫಲ ಕೊಡುವ ಭಾಷೆಯನ್ನು ಕಲಿಯಲು ಉತ್ತೇಜಿಸಬೇಕಾದದ್ದು ಸರ್ಕಾರದ ಕರ್ತವ್ಯ. ಈಗಿನ ಸರ್ಕಾರ ಇಂಗ್ಲಿಷ್ ಮಾಧ್ಯಮಕ್ಕೆ ಪ್ರೋತ್ಸಾಹ ಕೊಡುತ್ತಿರುವುದಕ್ಕೆ ಕಾರಣ, ಅದಕ್ಕೆ ಈಗ ಹೆಚ್ಚಿನ ಬೇಡಿಕೆ ಇರುವುದು.

-ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.