ವರ್ಷವಿಡೀ ಕಲಿಯುತ್ತಿದ್ದರೂ ಪರೀಕ್ಷೆಗೆ ಮಾತ್ರ ಚಕ್ಕರ್ ಹೊಡೆಯುತ್ತಿದ್ದ ವಯಸ್ಕರನ್ನು ಪರಿಹಾರ ಕೇಂದ್ರಗಳಲ್ಲಿ ಒಟ್ಟುಗೂಡಿಸಿ ಪರೀಕ್ಷೆ ಬರೆಸುವಲ್ಲಿ ವಯಸ್ಕರ ಶಿಕ್ಷಣ ವಿಭಾಗ ಸಫಲವಾಗಿರುವುದನ್ನು ತಿಳಿದು (ಪ್ರ.ವಾ., ಸೆ.12) ನಮ್ಮ ಸರ್ಕಾರಕ್ಕೆ ಶಿಕ್ಷಣದ ಕುರಿತು ಇರುವಂತಹ ವಿಶೇಷ ಕಾಳಜಿಗೆ ಹೆಮ್ಮೆ ಎನಿಸಿತು. ಈ ವಯಸ್ಕರು ನಾನಾ ಕಾರಣಗಳನ್ನು ನೀಡಿ ಪರೀಕ್ಷೆಗೆ ಚಕ್ಕರ್ ಹೊಡೆಯುತ್ತಿದ್ದವರು. ಆದರೆ, ಈ ಬಾರಿ ಪರೀಕ್ಷಾ ಸಮಯದಲ್ಲೇ ಜಿಲ್ಲೆಗೆ ಬಂದ ಭೀಕರ ಪ್ರವಾಹ, ಅವರನ್ನೆಲ್ಲ ಸಂತ್ರಸ್ತರನ್ನಾಗಿ ಮಾಡಿ ಶಾಲಾ ಕೊಠಡಿಗಳಿಗೆ (ಪರಿಹಾರ ಕೇಂದ್ರ) ತಳ್ಳಿತ್ತು. ವಯಸ್ಕರ ಶಿಕ್ಷಣ ವಿಭಾಗವು ಇದರ ಲಾಭ ಪಡೆಯಲು ಯಶಸ್ವಿಯಾಗಿ, ಅಲ್ಲೇ ಪರೀಕ್ಷೆ ಬರೆಸುವ ಮೂಲಕ ಶೇ 99ರಷ್ಟು ಹಾಜರಾತಿಯ ಸಾಧನೆ ಮಾಡಿರುವುದು ಖುಷಿ ತರುವ ಸಂಗತಿ.
ಕಲಿಕೆಗೆ ವಯಸ್ಸಿನ ಮಿತಿಯಿಲ್ಲ, ಕಲಿಯುವ ಉತ್ಸಾಹ ಇರಬೇಕಷ್ಟೆ ಎಂಬುದಕ್ಕೆ ಹಾವೇರಿ ಜಿಲ್ಲೆಯ ವಯಸ್ಕರು ಸಾಕ್ಷಿಯಾಗಿದ್ದಾರೆ. ದೇಶವನ್ನು ಕಾಡುತ್ತಿರುವ ಭಯಾನಕ ಜ್ವಲಂತ ಸಮಸ್ಯೆಗಳಲ್ಲಿ ಅನಕ್ಷರತೆಯೂ ಒಂದು. ತಂತ್ರಜ್ಞಾನದ ಯುಗದಲ್ಲಿ ಜಗತ್ತು ಡಿಜಿಟಲೀಕರಣದತ್ತ ದಾಪುಗಾಲು ಇಡುತ್ತಿರುವಾಗ, ಕೆಲವರು ಹೆಬ್ಬೆಟ್ಟಿನಲ್ಲೇ ಉಳಿದಿರುವುದು ದುರ್ದೈವದ ಸಂಗತಿ. ಪ್ರವಾಹ ಸಂತ್ರಸ್ತರು ಇಂತಹ ಸಂಕಷ್ಟದ ಸಮಯದಲ್ಲೂ ಕಲಿಕೆಗೆ ತೋರುತ್ತಿರುವ ಆಸಕ್ತಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಸಂಪೂರ್ಣ ಸಾಕ್ಷರತೆ ಸಾಧಿಸುವ ನಿಟ್ಟಿನಲ್ಲಿ ವಯಸ್ಕರ ಶಿಕ್ಷಣ ವಿಭಾಗದ ಈ ನಡೆ ಅತ್ಯಂತ ಪ್ರಶಂಸಾರ್ಹ.
–ನಾಗರಾಜ್ ಎಲ್.,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.