ADVERTISEMENT

ಸುಳ್ಳು ಸಂದೇಶ ಸಾಯುವುದೇ ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 18:51 IST
Last Updated 21 ಜುಲೈ 2019, 18:51 IST

ಫೇಸ್‍ಬುಕ್, ವಾಟ್ಸ್‌ಆ್ಯಪ್‌, ಟ್ವಿಟರ್, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಫೋಟೊವನ್ನು ಹಾಕಿ, ಮಗು ಕಾಣೆಯಾಗಿದೆ– ಪತ್ತೆಗೆ ಸಹಕರಿಸಿ, ಮಗು ಭಿಕ್ಷಾಟನೆ ಮಾಡುತ್ತಿದ್ದು ಹೆತ್ತವರಿಲ್ಲ, ಮಗು ಚಂದ ಇದ್ದು ಶ್ರೀಮಂತರ ಮಗುವಿನಂತೆ ಕಾಣುತ್ತಿದೆ, ಕದ್ದು ತಂದ ಮಗುವಾಗಿದ್ದು ಮಂಗಳೂರಿನದರಂತೆ ಕಾಣುತ್ತದೆ, ಬೆಂಗಳೂರಿನದರಂತೆ ಇದೆ, ಇದರ ಊರು ಚೆನ್ನೈ ಎಂದು ತೋರುತ್ತದೆ, ಹೆತ್ತವರಿಗೆ ತಲುಪುವವರೆಗೂ ಶೇರ್ ಮಾಡಿ ಎಂದು ವಿಳಾಸ, ಸ್ಪಷ್ಟವಾದ ಮಾಹಿತಿ ಇಲ್ಲದ ಸಂದೇಶಗಳು ರವಾನೆಯಾಗುತ್ತಿರುತ್ತವೆ.

ಇಂತಹ ತಲೆಬುಡ ಇಲ್ಲದ ಸಂದೇಶ ರವಾನಿಸಿದವರನ್ನು ಕೇಳಿದರೆ ‘ನಮಗೆ ಬೇರೆಯವರು ಕಳುಹಿಸಿದ್ದರು. ಅದನ್ನು ಫಾರ್ವರ್ಡ್ ಮಾಡಿದ್ದೇನೆ ಅಷ್ಟೆ’ ಎನ್ನುತ್ತಾರೆ. ಇಂತಹ ಸುಳ್ಳು ಸಂದೇಶಗಳು ವರ್ಷಾನುಗಟ್ಟಲೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮತ್ತೆ ಹರಿದಾಡುತ್ತಿರುತ್ತವೆ. ಇದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ, ಇಂತಹ ಆಧಾರರಹಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮತ್ತು ಫಾರ್ವರ್ಡ್ ಮಾಡುವ ವ್ಯಕ್ತಿಗಳ ಮೇಲೆ ಐ.ಟಿ ಕಾಯ್ದೆ ಅಡಿ ಕಾನೂನು ಕ್ರಮ ಜರುಗಿಸಬೇಕು.

ನಾಗರಾಜ್ ಕುಲಾಲ್, ಪಣಕಜೆ

ADVERTISEMENT

***

ಛೀ... ಥೂ... ಗೋಸುಂಬೆ

ರಾಜ್ಯದ ಶಾಸಕರ ಬೀದಿ ರಂಪಾಟ ಗಮನಿಸುತ್ತಿರುವ ಮತದಾರರಿಗೆ ಭ್ರಮನಿರಸನವಾಗಿದೆ. ಪ್ರಜಾಪ್ರಭುತ್ವ ಹಾಗೂ ಮತದಾರರ ಆಶಯಗಳಿಗೆ ತದ್ವಿರುದ್ಧವಾಗಿ, ಅಧಿಕಾರ, ಹಣಕ್ಕಾಗಿ ಲಜ್ಜೆಗೆಟ್ಟು ನಡೆಯುತ್ತಿರುವ ಈ ರಾಜಕಾರಣಿಗಳ ಗೋಸುಂಬೆ ನಾಟಕವನ್ನು ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮದಲ್ಲಿ ನೋಡಿ ‘ಛೀ... ಥೂ...’ ಅನ್ನುವಂತಾಗಿದೆ. ಮುಂದಿನ ದಿನಗಳಲ್ಲಿ, ಪಕ್ಷವೊಂದು ಸ್ಪಷ್ಟ ಬಹುಮತ ಪಡೆಯುವಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ.

ಡಿ.ಪ್ರಸನ್ನ ಕುಮಾರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.