‘ಸಿನಿಮೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ’ ಕುರಿತ ಲೇಖನ (ಪ್ರ.ವಾ., ಫೆ. 6) ಹಾಗೂ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಜೇಂದ್ರ ಸಿಂಗ್ (ಬಾಬು) ಅವರ ಹೇಳಿಕೆಗಳನ್ನು ಓದಿ ನಗಬೇಕೋ, ಅಳಬೇಕೋ ತಿಳಿಯದಾಯಿತು.
‘ವೈಭವ ಹಾಗೂ ಯಶಸ್ಸು ಒಟ್ಟಿಗೇ ಸಾಗುತ್ತವೆ’ ಎಂದು ಬಾಬು ಅವರು ಹೇಳಿರುವುದು ಫ್ಯಾಂಟಸಿ ಸಿನಿಮಾದಂತಿದೆ. ‘ಮಾನ್ಯತೆಯು ಮಾರುಕಟ್ಟೆಗೆ ರಹದಾರಿ’ ಎಂದು ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದ್ದಾರೆ. ಕೇಂದ್ರ ಸರ್ಕಾರ ನಡೆಸುವ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಾನ್ಯತೆ ಇದೆ. ಆದರೂ ಗೋವಾದ ಫಿಲ್ಮ್ ಬಜಾರೇ ಹೆಚ್ಚು ಸುಧಾರಿಸಿಲ್ಲ, ಇನ್ನು ಇಲ್ಲಿ? ಫಿಲ್ಮ್ ಅಕಾಡೆಮಿಯು ವಾರ್ತಾ ಇಲಾಖೆಯ ಕಟ್ಟಡದಲ್ಲಿದೆ. ಬೆಂಗಳೂರಿನ ಮೂಲೆಯೊಂದರಲ್ಲಿ ಇರುವ ಅಲ್ಲಿಗೆ ಎಷ್ಟು ಜನ ಹೋಗುತ್ತಿದ್ದಾರೆ?
ಎಚ್.ಎಸ್. ಮಂಜುನಾಥ, ಗೌರಿಬಿದನೂರು
***
ತಳಿ ಸಂರಕ್ಷಣೆ ಶ್ಲಾಘನೀಯ
ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಕೃಷಿ ಇಲಾಖೆಯು ವಿಶೇಷ ಸಮಿತಿ ರಚಿಸಿ, ರಾಜಮುಡಿ ಭತ್ತದ ತಳಿಗೆ ಭೌಗೋಳಿಕ ಗುರುತು ಪಡೆಯಲು ಹೊರಟಿರುವುದು ಸಂತಸದ ವಿಚಾರ. ಹಾಗೆಯೇ, ಅವನತಿಯ ಅಂಚಿನಲ್ಲಿರುವ ಇನ್ನೂ ಹಲವಾರು ವಿಶಿಷ್ಟ ತಳಿಗಳನ್ನು ಗುರುತಿಸಿ, ಇದೇ ರೀತಿ ಭೌಗೋಳಿಕವಾಗಿ ಗುರುತಿಸುವಂತೆ ಮಾಡಬೇಕಾಗಿದೆ. ಆಗ ಆ ವಿಶಿಷ್ಟ ತಳಿಗಳು ಮುಂದಿನ ಪೀಳಿಗೆಗೂ ದೊರೆಯುವಂತಾಗುತ್ತವೆ. ಅಲ್ಲದೆ, ಇಂತಹ ತಳಿಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಹಲವಾರು ರೈತರಿಗೂ ಪ್ರೋತ್ಸಾಹ
ನೀಡಿದಂತಾಗುತ್ತದೆ.
ಮಂಜುನಾಥ್ ಜೈನ್ ಎಂ.ಪಿ.,ಮಂಡ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.