ADVERTISEMENT

ಫ್ಲೆಕ್ಸ್ ಹಾವಳಿ: ಅನಾಹುತಕ್ಕೆ ಮುನ್ನ ಎಚ್ಚೆತ್ತುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 15:18 IST
Last Updated 4 ಅಕ್ಟೋಬರ್ 2021, 15:18 IST

ಬೆಂಗಳೂರಿನಲ್ಲಿ ಫ್ಲೆಕ್ಸ್ ನಿಯಂತ್ರಣಕ್ಕೆ ಕೋರ್ಟ್‌ ಆದೇಶ ನೀಡಿತ್ತು. ರಾಜಧಾನಿಯ ಅಂದ ಹಾಳಾಗುತ್ತಿದ್ದುದನ್ನು ಮನಗಂಡ ನ್ಯಾಯಾಲಯದ ಈ ಆದೇಶವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯವರು (ಬಿಬಿಎಂಪಿ) ಒಂದೆರಡು ವರ್ಷಗಳ ಕಾಲ ಕಟ್ಟುನಿಟ್ಟಾಗಿ ಪಾಲಿಸಿದರು. ಇತ್ತೀಚೆಗೆ ಹಲವಾರು ಕಾರಣಗಳ ನೆಪವೊಡ್ಡಿ ಮತ್ತೆ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇಂತಹದ್ದೇ ಕಾರಣ ಎನ್ನುವಂತಿಲ್ಲ. ಕೊರೊನಾ ಪ್ರಚಾರ, ಸರ್ಕಾರದ ಕೆಲಸಗಳ ಶಂಕುಸ್ಥಾಪನೆ, ಉದ್ಘಾಟನೆ, ಜನ್ಮದಿನ ಈ ರೀತಿಯ ಕಾರಣಗಳಿಗಾಗಿ ಜನಪ್ರತಿನಿಧಿಗಳ ಫೋಟೊ ಸಮೇತ ಫ್ಲೆಕ್ಸ್‌ಗಳು ಎಲ್ಲೆಡೆ ಕಂಡುಬರುತ್ತಿವೆ. ಜನಪ್ರತಿನಿಧಿಗಳ ಹಿಂಬಾಲಕರು ಹಟಕ್ಕೆ ಬಿದ್ದವರಂತೆ, ಫ್ಲೆಕ್ಸ್ ಮಾಡಿಸಿದರೆ ತಮ್ಮ ನಾಯಕರ ಕೃಪೆಗೆ ಪಾತ್ರರಾಗುತ್ತೇವೆ ಎಂಬ ಭ್ರಮೆಯಲ್ಲಿ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ. ಎಷ್ಟೋ ದಿನಗಳಾದರೂ ತೆಗೆಯದ ಫ್ಲೆಕ್ಸ್‌, ಬ್ಯಾನರ್‌ಗಳಿಂದ ಮಳೆಗಾಲದಲ್ಲಿ, ಹೆಚ್ಚು ಗಾಳಿ ಬಂದಾಗ ಅವು ಮೋರಿಗೋ ಒಳಚರಂಡಿಗೋ ಬಿದ್ದು ನೀರು ನಿಂತು ಅನಾಹುತಗಳಾಗುತ್ತವೆ. ಕಾರ್ಯಕ್ರಮ ಆದಮೇಲೆ ಅವುಗಳನ್ನು ತೆಗೆಸಲು ಆಯೋಜಕರು ಮನಸ್ಸು ಮಾಡುವುದಿಲ್ಲ. ಕಾರ್ಯಕ್ರಮ ಮುಗಿದ ಮಾರನೇ ದಿನ ಅವುಗಳನ್ನು ತೆಗೆಯುವಂತೆ ಬಿಬಿಎಂಪಿ ನೋಡಿಕೊಳ್ಳಬೇಕು.

-ಡಾ. ಮಲ್ಲತ್ತಹಳ್ಳಿ ಎಚ್. ತುಕಾರಾಂ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT