‘ಗುರು ರಾಘವೇಂದ್ರ ಬ್ಯಾಂಕ್’ನಲ್ಲಿ ಠೇವಣಿ ಇಟ್ಟು ವಂಚನೆಗೊಳಗಾದ ನಾಗರಿಕರು ನ್ಯಾಯ ಕೊಡಿಸುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿದಾಗ, ‘ನನ್ನನ್ನು ಕೇಳಿ ಠೇವಣಿ ಇಟ್ಟಿದ್ದೀರಾ’ ಎಂದು ಅವರು ಪ್ರಶ್ನಿಸಿದ್ದಾಗಿ ವರದಿಯಾಗಿದೆ (ಪ್ರ.,ವಾ., ಜುಲೈ 13). ಸಚಿವರನ್ನು ಕೇಳಿಯೇ ಯಾವ ನಾಗರಿಕರೂ ಬ್ಯಾಂಕುಗಳಲ್ಲಿ ಠೇವಣಿ ಇಡುವುದಿಲ್ಲ ಎಂಬುದು ತಿಳಿದ ವಿಚಾರವೇ ಸರಿ. ಕೇಂದ್ರ ಸರ್ಕಾರ ಮತ್ತು ಆರ್ಬಿಐ ಮೇಲೆ ಜನ ನಂಬಿಕೆ ಇಟ್ಟು ಠೇವಣಿ ಇಟ್ಟಿರುತ್ತಾರೆ. ವಂಚನೆ ಆದಾಗ ಸಚಿವರನ್ನು ಸಂಪರ್ಕಿಸಿ ನ್ಯಾಯ ಒದಗಿಸಲು ಕೇಳುತ್ತಾರೆ ಮತ್ತು ನ್ಯಾಯ ಒದಗಿಸಿಕೊಡುವುದು ಅವರ ಆದ್ಯಕರ್ತವ್ಯ. ಆದರೆ, ವಂಚನೆಗೆ ಒಳಗಾದವರಿಗೆ ಈ ರೀತಿ ಮರುಪ್ರಶ್ನೆಗಳನ್ನು ಕೇಳಿ ಮತ್ತಷ್ಟು ನೋವು ಕೊಡುವುದು ಉದ್ಧಟತನವೇ ಸರಿ. ಗಾಯದ ಮೇಲೆ ಉಪ್ಪು ಸುರಿಯುವಂತಹ ಮಾತುಗಳು ಸಚಿವರಿಗೆ ಶೋಭೆ ತರವು.
ಶಾಸಕರು, ಸಚಿವರು ಎಂದರೆ ಜನಸೇವಕರು ಎಂಬುದನ್ನು ಮರೆತು ನಡೆಯುವುದು ತರವಲ್ಲ. ಪ್ರಧಾನಮಂತ್ರಿಯೇ ತಾನು ಪ್ರಧಾನ ಸೇವಕ ಎಂದು ಹೇಳಿದ್ದಾರೆ. ವಂಚನೆಗೆ ಒಳಗಾಗಬೇಕೆಂದು ಯಾವ ನಾಗರಿಕರೂ ಬಯಸುವುದಿಲ್ಲ. ಆದರೆ, ಆ ರೀತಿ ಆದಾಗ ಮುಂದೆ ನಿಂತು ಸಮಸ್ಯೆಯನ್ನು ಪರಿಹರಿಸಿಕೊಡಬೇಕಾದದ್ದು ಜನಪ್ರತಿನಿಧಿಗಳ ಕೆಲಸ.
- ಪತ್ತಂಗಿ ಎಸ್. ಮುರಳಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.