ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಬ್ಬರೂ ದಿನಬೆಳಗಾದರೆ ಮಾಡಿಕೊಳ್ಳುವ ಪರಸ್ಪರ ಆರೋಪ, ಮಾಡುತ್ತಿರುವ ಭಾಷಾ ಪ್ರಯೋಗ, ನಾನು, ನನ್ನಿಂದ ಎಂಬ ಒಣಪ್ರತಿಷ್ಠೆಯ ಪೋಸ್ಗಳನ್ನು ನೋಡುತ್ತಿದ್ದರೆ, ಹಿಂದೊಮ್ಮೆ ಇವರಿಬ್ಬರೂ ರಾಜ್ಯವಾಳಿದವರೇ ಎಂಬ ಸಂಶಯ ಮೂಡುತ್ತದೆ. ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದವರಿಗೆ ಇರಬೇಕಾದ ತೂಕ, ವಿವೇಚನೆ, ಕನ್ನಡಿಗರಿಗೆ ನಾನು ಮೊದಲಿಗನಾಗಿ ಸೇವೆ ಸಲ್ಲಿಸಿದ್ದೆ ಎಂಬ ವಿನಯ ಇಲ್ಲದ ನಡವಳಿಕೆ ನೋಡಿದವರಲ್ಲಿ ಬೇಸರ ಉಂಟು ಮಾಡುತ್ತಿದೆ.
ರಾಜ್ಯದ ಜನ ಬುದ್ಧಿವಂತರು, ಸುಸಂಸ್ಕೃತರು, ಪ್ರತಿಯೊಂದನ್ನೂ ಅಳೆದೂ ತೂಗಿ ನೋಡುವ ವಿಚಾರವಂತರು. ಈ ಏಳು ಕೋಟಿ ಜನರೆದುರು ನಾವು ಆಡುವ ಪ್ರತಿಯೊಂದು ಮಾತೂ ಮಂಥನಕ್ಕೊಳಗಾಗುತ್ತಿದೆ ಎಂಬುದನ್ನು ಅವರು ಅರಿತಂತಿಲ್ಲ. ಪ್ರತಿದಿನ ಮಾಧ್ಯಮಗಳಲ್ಲಿ ತಮ್ಮ ಜಗಳ ನೋಡುತ್ತಿರುವ ಕನ್ನಡಿಗರು ತಮ್ಮ ಬಗ್ಗೆ ಹೇಸಿಗೆ ಪಟ್ಟುಕೊಳ್ಳುತ್ತಿರಬಹುದು ಎಂಬ ಕನಿಷ್ಠ ಜ್ಞಾನವೂ ಇಲ್ಲದಂತಹವರನ್ನು ಮುಖ್ಯಮಂತ್ರಿ ಪರಂಪರೆಯ ತಮ್ಮ ಹೆಜ್ಜೆಯಲ್ಲಿ ಹೆಜ್ಜೆ ಹಾಕಲು ಬಿಟ್ಟು ಹೋದ ಕೆ.ಸಿ.ರೆಡ್ಡಿ, ಕಡಿದಾಳ್ ಮಂಜಪ್ಪ, ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ದೇವರಾಜ ಅರಸು ಅವರುಗಳು ಧನ್ಯರಾದರು.
-ದೊಡ್ಡಕಮರವಳ್ಳಿ ಸಿದ್ದಲಿಂಗಪ್ಪ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.