ADVERTISEMENT

ವಾಚಕರ ವಾಣಿ: ಬೇಡದ ಕೆಲಸ ಬಿಡಿ, ಬೆವರು ಹರಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಜೂನ್ 2021, 19:45 IST
Last Updated 25 ಜೂನ್ 2021, 19:45 IST

‘ಯುದ್ಧವಿಲ್ಲದಾಗ ಹೆಚ್ಚು ಬೆವರು ಹರಿಸಿದರೆ ಯುದ್ಧದ ಸಮಯದಲ್ಲಿ ಹೆಚ್ಚು ರಕ್ತ ಸುರಿಸಬೇಕಾಗುವುದಿಲ್ಲ’ ಎಂಬ ಮಾತಿದೆ. ಕೋವಿಡ್ ಸಾಂಕ್ರಾಮಿಕ ಜಗತ್ತನ್ನೇ ತಲ್ಲಣಗೊಳಿಸಿದೆ. ಸಾಮಾನ್ಯ ಜನರ ಜೀವ ಮತ್ತು ಜೀವನವನ್ನು ಹೈರಾಣಾಗಿಸಿದೆ. ಅಧಿಕಾರವಿಲ್ಲದೇ ಏನೂ ಕೆಲಸವಿಲ್ಲದೇ ಕುಳಿತಿರುವ ಕಾಂಗ್ರೆಸ್ ಪಕ್ಷ ಜನರಿಗೆ ಹತ್ತಿರವಾಗಲು ಇದೊಂದು ಸದವಕಾಶ. ಈ ದುರಿತ ಕಾಲದಲ್ಲಿ ನಿಜಕ್ಕೂ ನೊಂದಿರುವ, ಹತಾಶರಾಗಿರುವ, ಜೀವ ಮತ್ತು ಜೀವನವನ್ನೇ ಕಳೆದುಕೊಂಡಿರುವ, ಹಸಿದಿರುವ ಜನಕೋಟಿಗೆ ನೆರವಿನ ಹಸ್ತ ಚಾಚಬಹುದು. ಸರ್ಕಾರ ಎಲ್ಲೋ ಅಲ್ಲೊಂದು ಇಲ್ಲೊಂದು ಎಂಬಂತೆ ಘೋಷಿಸಿರುವ ನೆರವನ್ನು ಅರ್ಹರಿಗೆ ತಲುಪಿಸಲು ವ್ಯವಸ್ಥೆ ಮಾಡಬಹುದು. ಈ ದಿಸೆಯಲ್ಲಿ ಹಗಲೂ ರಾತ್ರಿ ದುಡಿದರೂ ಮುಗಿಯದಷ್ಟು ಕೆಲಸಗಳಿವೆ‌.

ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿದೆ. ಈಗಿನಿಂದಲೇ ಮುಖ್ಯಮಂತ್ರಿ ಅಭ್ಯರ್ಥಿ ಬಗೆಗಿನ ಚರ್ಚೆ ಅನವಶ್ಯಕ. ಚುನಾವಣೆ ಎಂದರೆ ಅದೊಂದು ಮಹಾಸಮರ ಎಂಬಂತೆ ಕೆಲವು ಮಾಧ್ಯಮಗಳು ಬಿಂಬಿಸುತ್ತವೆ. ಅಂತಹ ಸಮರಕ್ಕೆ ತಯಾರಿ ನಡೆಸುವ ರೀತಿಯಲ್ಲಿ, ಮುಂಚೂಣಿಯಲ್ಲಿರುವ ನಾಯಕರು ತಳಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸಬಹುದು. ಫಲಾಪೇಕ್ಷೆ ಇಲ್ಲದೆ ಹಳ್ಳಿಯ ಕೊಂಪೆಗಳಿಗೂ ನಗರ ಪ್ರದೇಶದ ಗಲ್ಲಿ ಗಲ್ಲಿಗೂ ಹೋಗಿ ನೊಂದಿರುವ ಜೀವಗಳಿಗೆ ಸಹಾಯಹಸ್ತ ಚಾಚಲು ಮಾರ್ಗದರ್ಶನ ಮಾಡಬಹುದು. ಆಸ್ಪತ್ರೆ, ಔಷಧಗಳ ವ್ಯವಸ್ಥೆ ಮಾಡಬಹುದು. ಇಂತಹ ನೆರವಿನ ಅವಶ್ಯಕತೆ ಇರುವ ಇಂದಿನ ಈ ದಿನಗಳಲ್ಲಿ ಎಷ್ಟು ಬೆವರು ಹರಿಸುತ್ತೀರೋ, ಜನರಿಗೆ ಹತ್ತಿರವಾಗುವ ಅಷ್ಟು ಅವಕಾಶ ನಿಮ್ಮದಾಗುತ್ತದೆ ಎಂಬುದನ್ನು ಮರೆಯಬಾರದು.

-ವಿಶಾಲಾಕ್ಷಿ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT