ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಭಾನುವಾರ ಪರೀಕ್ಷೆ ನಡೆಸಿತು. ಸಾಮಾನ್ಯ ಜ್ಞಾನದ ಪ್ರಶ್ನೆಪತ್ರಿಕೆಯಲ್ಲಿ ವಿಜ್ಞಾನದ ಪ್ರಶ್ನೆಗಳೇ ಹೆಚ್ಚಾಗಿ ತುಂಬಿಹೋಗಿದ್ದವು. 100 ಪ್ರಶ್ನೆಗಳಲ್ಲಿ 45 ಪ್ರಶ್ನೆಗಳು ವಿಜ್ಞಾನಕ್ಕೆ ಸಂಬಂಧಿಸಿದವೇ ಆಗಿದ್ದವು. ಪರೀಕ್ಷೆಯ ದಿನ ರಾಷ್ಟ್ರೀಯ ವಿಜ್ಞಾನದ ದಿನವಾಗಿತ್ತು. ಈ ದಿನವನ್ನು ಪರೀಕ್ಷೆಯ ಮೂಲಕ ಆಚರಿಸಲೋ ಎಂಬಂತೆ ಆಯೋಗವು ವಿಜ್ಞಾನದ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳಿದ್ದುದು ಆಶ್ಚರ್ಯಕರವಾಗಿತ್ತು.
ಸಾಮಾನ್ಯ ಜ್ಞಾನದ ಪ್ರಶ್ನೆಪತ್ರಿಕೆಯಲ್ಲಿ ಇತಿಹಾಸ, ಸಂವಿಧಾನ, ವೈಯಕ್ತಿಕ ಜೀವನದಲ್ಲಿ ವಿಜ್ಞಾನ, ಮಾನಸಿಕ ಸಾಮರ್ಥ್ಯ, ಭೂಗೋಳ, ಪ್ರಚಲಿತ ಘಟನೆಗಳು ಸೇರಿದಂತೆ ಎಲ್ಲ ವಿಭಾಗಗಳಿಂದ ಪ್ರಶ್ನೆಗಳನ್ನು ಕ್ರೋಡೀಕರಿಸಿ ಕೇಳಬೇಕಾಗಿರುವುದು ನಿಯಮ. ಆದರೆ ಆಯೋಗವು ಇದನ್ನು ಗಾಳಿಗೆ ತೂರಿದ್ದರಿಂದ, ಕಲಾ ವಿಭಾಗದಲ್ಲಿ ಪದವಿ ಪಡೆದವರಿಗೆ ಪ್ರಶ್ನೆಪತ್ರಿಕೆಯು ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿತ್ತು.
ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಿಗೆ ಕುಖ್ಯಾತಿ ಪಡೆದಿರುವ ಕೆಪಿಎಸ್ಸಿಯು ಪ್ರಶ್ನೆಪತ್ರಿಕೆ ರಚಿಸುವ ಕಾರ್ಯದಲ್ಲಿಯೂ ಎಡವಿರುವುದು ಸಾವಿರಾರು ಅಭ್ಯರ್ಥಿಗಳಿಗೆ ಮಾರಕವಾಗಿರುವುದಂತೂ ನಿಜ. ಕೆಪಿಎಸ್ಸಿ ಇನ್ನಾದರೂ ಬದಲಾಗಲಿ.
- ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.