ADVERTISEMENT

ವಾಚಕರ ವಾಣಿ | ಜಲಜೀವನ್‌: ಹಣ ಸದುಪಯೋಗವಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಫೆಬ್ರುವರಿ 2022, 19:30 IST
Last Updated 24 ಫೆಬ್ರುವರಿ 2022, 19:30 IST

ಕೇಂದ್ರ ಸರ್ಕಾರವು ಬಹಳ ಆಸ್ಥೆಯಿಂದ ಜಲಜೀವನ್‌ ಮಿಷನ್‌ ಹಾಗೂ ಅಟಲ್‌ ಭೂ– ಜಲ್‌ ಯೋಜನೆಗಳನ್ನು ಜಾರಿಗೆ ತಂದಿದೆ. ಅನುದಾನವನ್ನೂ ಬಿಡುಗಡೆ ಮಾಡಿದೆ. ಸಾವಿರಾರು ಕೋಟಿ ರೂಪಾಯಿಯ ಈ ಯೋಜನೆಗಳು ಅರ್ಹರಿಗೆ ತಲುಪಿದರೆ ನಿಜಕ್ಕೂ ಅದೊಂದು ಉತ್ತಮ ಸಾಧನೆ. ಆದರೆ ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತಾಗಿದೆ ಈ ಯೋಜನೆಗಳ ಸ್ಥಿತಿ. ಯೋಜನೆಗಳಡಿ ಹಣವಿದೆ, ಅದನ್ನು ಖರ್ಚು ಮಾಡಬೇಕೆಂಬ ಒಂದೇ ಉದ್ದೇಶದಿಂದ, ಈಗಾಗಲೇ ನೀರಿನ ಸರಬರಾಜು ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಊರುಗಳ ಕೊಳವೆ ಮಾರ್ಗಕ್ಕೆ (ಪೈಪ್‌ಲೈನ್‌) ಪರ್ಯಾಯವಾಗಿ, ಉತ್ತಮವಾಗಿ ಹಾಕಿದ್ದ ಕಾಂಕ್ರೀಟ್‌ ರಸ್ತೆಗಳನ್ನು ಅಡಿಗಡಿಗೂ ಯಂತ್ರಗಳಿಂದ ಕತ್ತರಿಸಿ ಹಾಳು ಮಾಡಿ ಹೊಸ ಪೈಪ್‌ಲೈನ್‌ ಹಾಕಲಾಗುತ್ತಿದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ!

ಮತ್ತೊಂದೆಡೆ, ಕುಡಿಯುವ ನೀರಿಗೂ ತತ್ವಾರವಾಗಿ ಉತ್ತರ ಕರ್ನಾಟಕದ ಸಾವಿರಾರು ಗ್ರಾಮಗಳು ತೊಂದರೆ ಅನುಭವಿಸುತ್ತಿವೆ. ಹಾಲಿ ಇರುವ ನೀರು ಸರಬರಾಜು ವ್ಯವಸ್ಥೆಯ ಕೊಳವೆ ಮಾರ್ಗ ಹಾಳಾದರೆ ಬದಲಿ ಮಾರ್ಗ ಹಾಕುವುದು ಸರಿ. ಆದರೆ ಬೇರೊಂದು ಪೈಪ್‌ಲೈನ್‌ ಏಕೆ? ಇರುವ ಮಾರ್ಗದ ಮೂಲಕವೇ 24 ಗಂಟೆ ನೀರನ್ನು, ಅದೂ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ ತನ್ಮೂಲಕ ಕೊಡಲಿ. ಅದುಬಿಟ್ಟು ಕೇವಲ ಹಣ ಕೊಳ್ಳೆ ಹೊಡೆಯಲು ಹಣವನ್ನು ಯೋಜನೆಯ ಮೂಲಕ ಭೂಮಿಗೆ ಹಾಕದಿರಲಿ. ತೆರಿಗೆ ಹಣ ಪೋಲಾಗದಿರಲಿ. ಈ ಯೋಜನೆಯ ವಿರುದ್ಧ ಉತ್ತರ ಕನ್ನಡದ ಕೆಲವು ಊರುಗಳ ಜನ ಧ್ವನಿ ಎತ್ತಿದ್ದಾರೆ. ಶಂಕುಸ್ಥಾಪನೆಯನ್ನು ತಡೆದು ಹಿಮ್ಮೆಟ್ಟಿಸಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಹಾಗಾಗಿ ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು, ಅರ್ಹರಿಗೆ ಕುಡಿಯುವ ನೀರು ಸರಬರಾಜು ಮಾಡಲಿ.

-ಹೊಸಹಳ್ಳಿ ದಾಳೇಗೌಡ, ಬಿ.ಆರ್‌. ಪ್ರಾಜೆಕ್ಟ್‌, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.