ADVERTISEMENT

ವಾಚಕರ ವಾಣಿ: ಯಡಿಯೂರಪ್ಪ ಅನಿವಾರ್ಯವಲ್ಲವೇ?

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:30 IST
Last Updated 9 ಜನವರಿ 2023, 19:30 IST

‘ಬಿಜೆಪಿಗೆ ದೇವದುರ್ಲಭವಾದ ಕಾರ್ಯಕರ್ತರ ಪಡೆ ಇದೆ. ಆ ಕಾರ್ಯಕರ್ತರಿಂದಲೇ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ. ಅದಕ್ಕೆ ಯಡಿಯೂರಪ್ಪ, ನಳಿನ್‌ಕುಮಾರ್‌ ಕಟೀಲ್ ಯಾರೂ ಅನಿವಾರ್ಯವಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರು ಹೇಳಿರುವುದಾಗಿ ವರದಿಯಾಗಿದೆ. ಆದರೆ ವಾಸ್ತವ ಬೇರೆಯೇ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಅವರಿಗೆ ಕೆಲವೇ ಸ್ಥಾನಗಳು ಬಂದರೂ ಅದರಿಂದ ಬಿಜೆಪಿಗೆ ಎಷ್ಟು ಹಾನಿಯಾಯಿತು, ಅದು ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಗೆ ಹೇಗೆ ಕಾರಣವಾಯಿತು ಎಂಬುದನ್ನು ರಾಜ್ಯದ ಜನ ಗಮನಿಸಿದ್ದಾರೆ. ಆಗ ಕಾರ್ಯಕರ್ತರ ಪಡೆ ಇರಲಿಲ್ಲವೇ? ಕೆಜೆಪಿಯನ್ನು ಕಾಪಿಟ್ಟುಕೊಂಡು ಬಂದಿದ್ದರೆ ಅದು ಜೆಡಿಎಸ್‌ನಂತೆ ಕಿಂಗ್‌ಮೇಕರ್ ಪಕ್ಷ
ಆಗುತ್ತಿತ್ತೋ ಏನೋ. ಆದರೆ ಅವರು ಹಾಗೆ ಮಾಡದೆ ಮಾತೃಪಕ್ಷಕ್ಕೆ ಮರಳಿದರು. ಬಿಜೆಪಿಗೂ ಅವರನ್ನು ಸೇರಿಸಿಕೊಳ್ಳು ವುದು ಅನಿವಾರ್ಯವಾಗಿತ್ತು. ಅಧಿಕಾರವಿಲ್ಲದಿದ್ದರೂ ರಾಜಕೀಯವಾಗಿ ಯಡಿಯೂರಪ್ಪ ಬಲಿಷ್ಠರಾಗಿರಲು ಕಾರಣ, ಅವರು ಪ್ರಬಲ ಕೋಮಿಗೆ ಸೇರಿದ ಮಾಸ್ ಲೀಡರ್ ಆಗಿರುವುದು ಮತ್ತು ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದು.

ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವ ಮಾತಿನಲ್ಲಿ ಹುರುಳಿದೆ ಎಂದು ಬಿಜೆಪಿಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳಿಂದ ತಿಳಿಯಬಹುದು. ಕುಟುಂಬ ರಾಜಕೀಯದ ಕಾರಣ ಒಡ್ಡಿ ಯಡಿಯೂರಪ್ಪ ಕುಟುಂಬಕ್ಕೆ ಒಂದೇ ಟಿಕೆಟ್ ನೀಡುವ ಮೂಲಕ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಬಹುದು. ಹೀಗಾದಲ್ಲಿ ಯಡಿಯೂರಪ್ಪ ಏನು ಮಾಡುತ್ತಾರೆ, ಅದು ಪಕ್ಷದ ಮೇಲೆ ಬೀರುವ ಪರಿಣಾಮವೇನು ಎಂಬುದನ್ನು ಕಾದು ನೋಡಬೇಕು.

–ಶಿವಕುಮಾರ ಬಂಡೋಳಿ, ಹುಣಸಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.