ADVERTISEMENT

ಕಸಾಪ: ಬೇಕಿರುವುದು ಜನಪ್ರಿಯ ಘೋಷಣೆಗಳಲ್ಲ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 19:31 IST
Last Updated 30 ಜನವರಿ 2022, 19:31 IST

‘ಕಸಾಪ: ನಿರೀಕ್ಷೆಗಳ ಭಾರಕ್ಕೆ ಕುಸಿದೀತು!’ ಎಂಬ ರಾ.ನಂ.ಚಂದ್ರಶೇಖರ ಅವರ ಲೇಖನದಲ್ಲಿ ಇರುವ ಕಳಕಳಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಗಮನಿಸಿದ್ದಾರೆಂದು ಭಾವಿಸಿದ್ದೇನೆ. ಹಾಗೆಯೇ ನನಗೆ ಬಂದಿರುವ ಅಧ್ಯಕ್ಷರ ಚುನಾವಣಾ ಗೆಲುವಿನ ಮುದ್ರಿತ ಪತ್ರವನ್ನು (ಬಹುಶಃ ಆ ಪತ್ರ ಬಹಳ ಜನರಿಗೆ ಹೋಗಿರಬಹುದು) ಗಮನಿಸಿದಾಗ, ರಾ.ನಂ.ಚಂದ್ರಶೇಖರ ಅವರ ಕಳಕಳಿಯು ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಸಂಬಂಧವಿರುವ ಎಲ್ಲರ ಕಳಕಳಿಯಾಗಿದೆ ಎನಿಸಿತು.

ಪರಿಷತ್ತಿನ ಅಧ್ಯಕ್ಷ ಸ್ಥಾನ ರಾಜಕೀಯ ವ್ಯವಸ್ಥೆಯದಲ್ಲ. ಅದು ಪೂರ್ಣ ಸಾಹಿತ್ಯ ಮತ್ತು ಸಂಸ್ಕೃತಿ ಸಂರಕ್ಷಣೆ ಮತ್ತು ಸಂವರ್ಧನೆಯ ಸ್ಥಾನ. ಅದಕ್ಕೆ ಮುಖ್ಯವಾಗಿ ಬೇಕಾದದ್ದು ಅವಸರದ ಜನಪ್ರಿಯ ಘೋಷಣೆಗಳಲ್ಲ, ಪರಿಷತ್ತಿನ ನಿಬಂಧನೆಗೆ ಅನುಗುಣವಾಗಿ ಅದರ ಧ್ಯೇಯೋದ್ದೇಶಗಳ ಸಾರ್ಥಕತೆಗೆ ಬೇಕಾದ ಸಮರ್ಪಣಾಭಾವದ ಸೇವೆ. ಪರಿಷತ್ತಿನ ಘನತೆ- ಗೌರವಗಳಿಗೆ ಭಂಗವುಂಟಾಗದಂತೆ ನೋಡಿಕೊಳ್ಳುವ ಎಚ್ಚರ. ಈ ಹಿನ್ನೆಲೆಯಲ್ಲಿ ರಾ.ನಂ.ಚಂದ್ರಶೇಖರ ಅವರ ಅಭಿಮತವನ್ನು ನಾನು ಒಪ್ಪುತ್ತೇನೆ. ರಾಜಕೀಯದಲ್ಲಿ ಏನೇನೋ ಮಾಡುವುದಾಗಿ ಘೋಷಿಸಿ, ಎಷ್ಟೋ ಜನ ಏನೂ ಮಾಡದೇ ಹೋಗಿದ್ದಾರೆ. ಈಗಿನ ಅಧ್ಯಕ್ಷರು ಹಾಗಾಗದಿರಲಿ.

ಗೊ.ರು.ಚನ್ನಬಸಪ್ಪ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.