ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸುವುದಿಲ್ಲ ಎಂದಿರುವ ಸುದ್ದಿ (ಪ್ರ.ವಾ., ಸೆ. 13) ಓದಿದೆ. ಜಾಣತನದ ಹಾಗೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗದ ಅಧ್ಯಕ್ಷರ ಉತ್ತರ ಗಮನಿಸಿ: ‘ಪಂಪ ಮಹಾಕವಿ ರಸ್ತೆ’ ಬದಲು ಅವರು ಮರು ನಾಮಕರಣಕ್ಕೆ ಸಲಹೆ ನೀಡಿದ್ದು ‘ನಾಡೋಜ ಪಂಪ ಮಹಾಕವಿ- ಕನ್ನಡ ಸಾಹಿತ್ಯ ಪರಿಷತ್ತು ರಸ್ತೆ’!
ಇದು ಎಷ್ಟು ಸರಿ? ಅಧ್ಯಕ್ಷರು ಮೇಲಿನ ಮರುನಾಮಕರಣಕ್ಕೆ ಮುಖ್ಯಮಂತ್ರಿ ಅವರಿಗೆ ಸಲಹೆ ಮಾಡಿದ್ದು ಸುಳ್ಳೇ? ಜೊತೆಗೆ 21 ಅಕ್ಷರಗಳನ್ನುಳ್ಳ ಮೈಲುದ್ದದ ಹೆಸರನ್ನು ಯಾರಾದರೂ ಬರೆಯುವುದುಂಟೇ? ಈಗಲೇ ಪಂಪ ಮಹಾಕವಿ ರಸ್ತೆಯ ಹೆಸರು ಪಿ.ಎಂ. ರಸ್ತೆ ಆಗಿದೆ! ರಾಜಾಜಿನಗರದ ಮಹಾಕವಿ ಕುವೆಂಪು ರಸ್ತೆಯು ಎಂ.ಕೆ. ರಸ್ತೆ ಆಗಿದೆ. ಇನ್ನು ನಾಡೋಜ ಪಂಪ ಮಹಾಕವಿ- ಕನ್ನಡ ಸಾಹಿತ್ಯ ಪರಿಷತ್ತು ರಸ್ತೆಯು ಮುಂದೆ ಎನ್.ಪಿ.ಎಂ.ಕೆ. ಎಸ್.ಪಿ ರಸ್ತೆ ಆಗುವುದಿಲ್ಲ ಅನ್ನುವುದಕ್ಕೆ ಯಾವ ಗ್ಯಾರಂಟಿ? ನಿರ್ಣಯದ ಬಗ್ಗೆ ಕಾರ್ಯಕಾರಿ ಸಮಿತಿಯ ಮಾತು ಅಂತಿಮ ಅನ್ನುವುದು ಹಾಸ್ಯಾಸ್ಪದ ಅಲ್ಲವೆ? ಅಲ್ಲಿ ಆಂತರಿಕ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೇ? ಹೆಸರು ಬದಲಾಯಿಸಲು ಸಲಹೆ ಕೊಟ್ಟ ಮಹಾಶಯರ ಹೆಸರನ್ನು ಮಾಧ್ಯಮಕ್ಕೆ ತಿಳಿಸಿ.
– ಆರ್.ಜಿ.ಹಳ್ಳಿ ನಾಗರಾಜ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.