ಕೊರೊನಾ ಸೋಂಕಿನ ಭೀತಿಯಿಂದ ವಲಸೆ ಕಾರ್ಮಿಕರು ಪ್ರಾಣ ಉಳಿಸಿಕೊಳ್ಳಲು ತಮ್ಮದೆಲ್ಲವನ್ನೂ ಕಟ್ಟಿಕೊಂಡು, ಮಕ್ಕಳು ಮರಿ ಸಮೇತ ನಡೆದುಕೊಂಡೋ ಸೈಕಲ್ ಮೂಲಕವಾಗಿಯೋ ಅಥವಾ ಸಿಕ್ಕ ಸಿಕ್ಕ ಸಾರಿಗೆಯ ಮೂಲಕವೋ ತಮ್ಮೂರ ದಾರಿ ಹಿಡಿದಿದ್ದಾರೆ. ಇವರಲ್ಲಿ ಅನೇಕರು ಅಲ್ಲಲ್ಲಿ ಸಂಭವಿಸಿದ ಅಪಘಾತಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವುದು ದುಃಖದ ಸಂಗತಿ. ಕಾರ್ಮಿಕರ ಈ ದುಃಸ್ಥಿತಿ ಮನಕಲಕುವಂತಹದ್ದು. ಬದುಕು ಕಟ್ಟಿಕೊಳ್ಳಲು ಹೋಗಿ ಬದುಕನ್ನೇ ಕೊನೆಗೊಳಿಸಿಕೊಂಡ ನತದೃಷ್ಟರಿವರು. ಇನ್ನೂ ಅದೆಷ್ಟು ಕಾರ್ಮಿಕರು ಈ ರೀತಿ ಬಲಿಯಾಗಬೇಕು? ಇದಕ್ಕೆ ಕೊನೆಯೇ ಇಲ್ಲವೇ? ಇನ್ನು ಮುಂದಾದರೂ ಅಮಾಯಕರು ಈ ರೀತಿ ಬಲಿಯಾಗು
ವುದನ್ನು ತಡೆಯುವ ಮಾರ್ಗೋಪಾಯಗಳನ್ನು ನಮ್ಮ ಆಡಳಿತ ವ್ಯವಸ್ಥೆಯು ರೂಪಿಸಲಿ. ಇಲ್ಲದಿದ್ದರೆ ಮುಂದೊಂದು ದಿನ ಕಾರ್ಮಿಕರ ಬರ ಎದುರಿಸಬೇಕಾದ ಪರಿಸ್ಥಿತಿ ದೇಶಕ್ಕೆ ಬಂದರೂ ಬಂದೀತು.
ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗೆ ವಾರಿಯರ್ಸ್ ಪಟ್ಟ ಕಟ್ಟಿ ಅವರನ್ನು ಅಭಿನಂದಿಸಿದ್ದೇವೆ, ಗೌರವ ಸೂಚಿಸಿ ಚಪ್ಪಾಳೆ ತಟ್ಟಿದ್ದೇವೆ. ನಾಡನ್ನು ಬೆಳಗಿಸುವ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಶ್ರಮವಹಿಸಿ ದುಡಿದು, ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಈ ಶ್ರಮಿಕ ವೃಂದದ ಸಹೋದರ ಸಹೋದರಿಯರಿಗೆ ನಾವ್ಯಾಕೆ ಗೌರವ ಸೂಚಿಸಬಾರದು?
-ಎಡ್ವರ್ಡ್ ಚಿಲ್ಲಾಳ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.