ADVERTISEMENT

ವಾಚಕರ ವಾಣಿ: ಇಂತಹವರ ಸಂತತಿ ಸಹಸ್ರವಾಗಲಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 17:51 IST
Last Updated 25 ಫೆಬ್ರುವರಿ 2021, 17:51 IST

ಧಾರವಾಡದ ಮುರುಘಾಮಠದ ಸಂಸ್ಥಾಪಕ ಗುರುಗಳಾದ ಮೃತ್ಯುಂಜಯ ಸ್ವಾಮೀಜಿ ತಾವು ನಡೆಸುತ್ತಿದ್ದ ಉಚಿತ ಪ್ರಸಾದ ನಿಲಯಕ್ಕೆ ಸರ್ಕಾರ ಧನಸಹಾಯ ನೀಡಲು ಮುಂದೆ ಬಂದರೂ ಅದನ್ನು ಪಡೆಯದಿದ್ದುದು ಮತ್ತು ಇತ್ತೀಚೆಗೆ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ತಮ್ಮ ಆಶ್ರಮಕ್ಕೆ ಸರ್ಕಾರ ನೀಡಲು ಬಂದ ಅನುದಾನವನ್ನು ನಿರಾಕರಿಸಿರು
ವುದು ಶ್ಲಾಘನೀಯ. ಆದರೆ ರಾಜ್ಯದ ಜಾತಿವಾರು ಮಠಗಳು ಸ್ಪರ್ಧಾತ್ಮಕವಾಗಿ ತಮ್ಮ ಜಾತ್ರೆಗೆ ಮುಖ್ಯಮಂತ್ರಿಯನ್ನು ಕರೆಸುವುದು, ತಮ್ಮ ಜಾತಿಯ ಇಷ್ಟು ಮತಗಳಿವೆ, ಇಷ್ಟು ಮಂದಿ ಶಾಸಕರಿದ್ದಾರೆ, ಹೀಗಾಗಿ ಮಂತ್ರಿಗಿರಿ, ಇಷ್ಟು ಕೋಟಿ ಅನುದಾನ ಕೊಡದಿದ್ದರೆ ನಿಮ್ಮ ಸರ್ಕಾರ ಉರುಳಿಸುತ್ತೇವೆ ಎಂದೆಲ್ಲ ಬ್ಲ್ಯಾಕ್‌ಮೇಲ್ ಮಾಡುವುದು ವಚನಗಳ ಆಶಯ ಹಾಗೂ ಬಸವಣ್ಣನ ತತ್ವ, ಸಿದ್ಧಾಂತಗಳಿಗೆ ಕಿಂಚಿತ್ತಾದರೂ ಹೊಂದುತ್ತದೆಯೇ ಎಂದು ಯೋಚಿಸಲಿ.

ಜಾತಿ ಹಿಡಿದು ಮೀಸಲಾತಿ ಕೇಳುತ್ತಾ ಹೊರಟಿರುವವರ ಅಬ್ಬರಕ್ಕೆ ಏನೆನ್ನುವುದು? ಬಾಯಲ್ಲಿ ಬಸವಣ್ಣನ ನುಡಿಮುತ್ತುಗಳನ್ನು ಉದುರಿಸುತ್ತಾ ಅಂತರಂಗದಲ್ಲಿ ಬರೀ ಕುಟಿಲ, ಸ್ವಾರ್ಥ, ಪ್ರತಿಷ್ಠೆ, ಜಾತೀಯತೆ ಇಟ್ಟುಕೊಂಡು ಕಟ್ಟಕಡೆಯ ಜಾತಿಗಳ ಮನುಷ್ಯರಿಗೆ ದೊರೆಯಬೇಕಾದ ಮೀಸಲಾತಿಯು ಬಹುಸಂಖ್ಯೆಯ ಬಲಾಢ್ಯರಾದ ತಮಗೇ ದೊರೆಯಬೇಕೆಂದು ಒತ್ತಡ ಹೇರುವುದು ಸರಿಯೇ? ಇಂತಹ ನಡೆಯು ಸಂವಿಧಾನದ ತತ್ವಗಳಾದ ಸಾಮಾಜಿಕ ನ್ಯಾಯ, ಸಹೋದರತೆ, ಸಮಾನತೆ, ಸ್ವಾತಂತ್ರ್ಯಕ್ಕೆ ತದ್ವಿರುದ್ಧ. ಇನ್ನಾದರೂ ಈ ಸ್ವಾಮಿಗಳು ‘ಇವ ನಮ್ಮವ, ಇವ ನಮ್ಮವ’ ಎಂಬ ವಿಶಾಲ ತತ್ವದಡಿ ಆತ್ಮಾವಲೋಕನ ಮಾಡಿಕೊಂಡು ಬಸವಣ್ಣನ ನಿಜ ತತ್ವ ಆಚರಿಸಲು ಮುಂದಾಗಲಿ. ಬೇಡುವವರಾಗದೆ ನೀಡುವವರಾಗಲಿ.

ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.