‘ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸ್ವಲ್ಪ ಉಸಿರಾಡುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆ ಮುಗಿದ ಬಳಿಕ ಅವರಿಬ್ಬರ ಉಸಿರೂ ನಿಲ್ಲುತ್ತದೆ’ ಎಂದು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ (ಕಿಡಿನುಡಿ, ಪ್ರ.ವಾ., ಜ. 24). ಎದುರಾಳಿ ಬಲವಾಗಿದ್ದಾಗಲೇ ಹೋರಾಟವು ಕಳೆ ಕಟ್ಟುವುದು. ಆದ್ದರಿಂದ ಈ ಕಾಂಗ್ರೆಸ್ ಮುಖಂಡರ ಆಯಸ್ಸು ವೃದ್ಧಿಸಲಿ ಮತ್ತು ಆರೋಗ್ಯ ಚೆನ್ನಾಗಿ ಇರಲಿ ಎಂದು ಆಶಿಸುವುದೇ ನಿಜವಾದ ಹೋರಾಟಗಾರನ ಲಕ್ಷಣ.
ಇಂತಹ ಗುಣವನ್ನು ಜವಾಹರಲಾಲ್ ನೆಹರೂ ಅವರಲ್ಲಿ ಇತ್ತು. ಪ್ರಧಾನಿ ನೆಹರೂ ಅವರನ್ನು, ರಾಮ ಮನೋಹರ ಲೋಹಿಯಾ ಅವರಷ್ಟು ಸಂಸತ್ತಿನ ಒಳಗೆ ಮತ್ತು ಹೊರಗೆ ಟೀಕೆ ಮಾಡುತ್ತಿದ್ದವರು ಬೇರೆ ಸಿಗಲಾರರು. ಚುನಾವಣೆಯೊಂದರಲ್ಲಿ ಲೋಹಿಯಾ ಸೋತಾಗ, ನೆಹರೂ ಅವರು ‘ರಾಮಮನೋಹರ ಲೋಹಿಯಾ ಇಲ್ಲದ ಪಾರ್ಲಿಮೆಂಟ್ ಅಪೂರ್ಣ’ ಎಂದು ಅವರ ಸೋಲಿಗೆ ವಿಷಾದಿಸಿದ್ದರು. ಉಪಚುನಾವಣೆಯಲ್ಲಿ ಲೋಹಿಯಾ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದಾಗ, ‘ಈಗ ಪಾರ್ಲಿಮೆಂಟ್ ಪೂರ್ಣವಾಯಿತು’ ಎಂದು ನೆಹರೂ ಸಂಭ್ರಮಿಸಿದರು. ಎದುರಾಳಿಯ ಸೋಲನ್ನೇ ಬಯಸದ ಅಂದಿನ ರಾಜಕೀಯ ಧುರೀಣರ ನಡೆ, ಎದುರಾಳಿಯ ಸಾವನ್ನು ಬಯಸುವ ಇಂದಿನ ರಾಜಕೀಯ ವ್ಯಕ್ತಿಗಳಿಗೆ ಮಾದರಿಯಾಗಬೇಕಿದೆ.
–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.