ರಾಜ್ಯದ ಈ ಹಿಂದಿನ ಸಮ್ಮಿಶ್ರ ಸರ್ಕಾರವು ಸಾಲಮನ್ನಾ ಮಾಡಿದ್ದರ ಪ್ರಯೋಜನ ಪಡೆದ ಹುಬ್ಬಳ್ಳಿ ತಾಲ್ಲೂಕಿನ ಹಿರೇಸೂರದ ರೈತ ಗೋವಿಂದಪ್ಪ ಶ್ರೀಹರಿ ಅವರು ಕೃತಜ್ಞತಾಪೂರ್ವಕವಾಗಿ, ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೋಳದ ರೊಟ್ಟಿಯ ಪಾರ್ಸಲ್ ಕಳುಹಿಸಿದ್ದಾರೆ (ಪ್ರ.ವಾ., ಡಿ. 19). ತಮ್ಮ ಹೊಲದಲ್ಲಿ ಬೆಳೆದ ಜೋಳದಿಂದ ರೊಟ್ಟಿ ಮಾಡಿ ಕಳುಹಿಸುವ ಮೂಲಕ ಅವರು ಧನ್ಯತಾಭಾವ ಮೆರೆದಿದ್ದಾರೆ. ರೈತರ ಇಂತಹ ಕೃತಜ್ಞತಾ ಮನೋಭಾವಕ್ಕೆ ಸಾಟಿ ಇಲ್ಲ. ಹಿಂದೆ ತಾವು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಪತ್ರ ಬರೆದಿದ್ದ ಗೋವಿಂದಪ್ಪ ಅವರ ನೋವಿಗೆ ಕ್ಷಣಾರ್ಧದಲ್ಲಿ ಕರೆ ಮಾಡಿ ಸಾಂತ್ವನ ಹೇಳಿದ್ದ ಕುಮಾರಸ್ವಾಮಿ ಅವರ ನಡೆ ಕೂಡ ಶ್ಲಾಘನೀಯ. ರೈತ ಬಯಸುವುದು ಸಹ ಇಂತಹ ಸಾಂತ್ವನ, ಸ್ವಲ್ಪ ಮಟ್ಟಿನ ಸಹಾಯವನ್ನು. ಸಹಾಯಕ್ಕೆ ಆಭಾರಿಯಾದ ಗೋವಿಂದಪ್ಪ ಅವರ ಮನೋಭಾವ ಮಾದರಿಯಾಗುವಂತಹದ್ದು.
ಯೋಜನೆಗಳ ಫಲ ನಿಜವಾದ ಫಲಾನುಭವಿಗಳಿಗೆ ತಲುಪಬೇಕು. ಆಗಮಾತ್ರ ಆ ಯೋಜನೆಗೆ ಹಾಗೂ ಅದನ್ನು ಜಾರಿ ಮಾಡಿದವರಿಗೆ ಸಾರ್ಥಕತೆ ಲಭಿಸಲು ಸಾಧ್ಯ ಎಂಬುದಕ್ಕೆ ಇದೊಂದು ನಿದರ್ಶನ. ಕೌಟಿಲ್ಯನು ತನ್ನ ಅರ್ಥಶಾಸ್ತ್ರ ಕೃತಿಯಲ್ಲಿ ಹೇಳುವ ‘ರಾಜನ ಪ್ರಾಥಮಿಕ ಕರ್ತವ್ಯ’ ಈ ರೀತಿಯದ್ದಲ್ಲದೆ ಬೇರೆಯಾಗಿರಲು ಸಾಧ್ಯವೇ?
ಶ್ವೇತಾ ಎನ್., ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.