‘ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಕುಟುಂಬದ ಹಿಡಿತದಲ್ಲಿದೆ’ ಎಂಬ ಟೀಕೆಯನ್ನು ಈಗಿನ ನಡವಳಿಕೆಗಳು ರುಜುವಾತುಪಡಿಸುತ್ತಿವೆ. ಪಕ್ಷದ ಅಧ್ಯಕ್ಷ ಸ್ಥಾನ ‘ನಮಗೆ ಬೇಡ’ ಎಂದು ನೆಹರೂ– ಗಾಂಧಿ ಕುಟುಂಬವೇ ಹೇಳಿದೆ. ಈಗ ತಾವು ‘ಒಪ್ಪುವವರನ್ನೇ’ ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಹಟ ತೊಟ್ಟಂತಿದೆ. ತಮ್ಮ ‘ಆಪ್ತ’ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಲು ಸೂಚಿಸಿತು. ಆದರೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಸರ್ಕಾರವನ್ನು ಉರುಳಿಸಲು ಸಂಚು ಮಾಡಿದ ಸಚಿನ್ ಪೈಲಟ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೇಮಿಸುವುದು ಬೇಡ ಎಂದು ಗೆಹಲೋತ್ ಬೆಂಬಲಿಗರು ಹೇಳಿದ್ದಕ್ಕೆ, ಪಕ್ಷಕ್ಕೆ ‘ನಿಷ್ಠ’ರಾಗಿದ್ದ ಗೆಹಲೋತ್ ಈಗ ತಮಗೆ ನಿಷ್ಠರಾಗಿಲ್ಲ ಎಂದು ಅವರ ಮೇಲೇ ಗರಂ ಆಗಿ, ಅವರ ಬದಲು ಮತ್ತೊಬ್ಬ ಆಪ್ತರನ್ನು ಹುಡುಕಲಾಗುತ್ತಿದೆ.
ಹೆಚ್ಚಿನ ಶಾಸಕರು ‘ನಮ್ಮ ನಾಯಕನನ್ನು ನೆಹರೂ–ಗಾಂಧಿ ಕುಟುಂಬವೇ ನಿರ್ಧರಿಸಲಿ’ ಎಂದಾಗ ನಾಯಕತ್ವವು ತಲೆದೂಗುತ್ತದೆ. ರಾಜಸ್ಥಾನದಲ್ಲಿ ಈಗ ಹೆಚ್ಚಿನ ಶಾಸಕರು ‘ನಮ್ಮ ನಾಯಕನನ್ನು ನಾವೇ ಆರಿಸುತ್ತೇವೆ’ ಎಂದಾಗ ಅವರಿಗೆ ಪಕ್ಷ ವಿರೋಧಿ ಎಂಬ ಹಣೆಪಟ್ಟಿ ಹಾಕುವುದು ಸರಿಯೇ? ಪಕ್ಷವು ಕುಟುಂಬದ ಸ್ವತ್ತೇ?
- ಪಿ.ಸಿ.ಕೇಶವ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.