ADVERTISEMENT

ವಾಚಕರ ವಾಣಿ: ತನಿಖಾಧಿಕಾರಿಯನ್ನು ಕಾನೂನು ಕ್ಷಮಿಸದು

​ಪ್ರಜಾವಾಣಿ ವಾರ್ತೆ
Published 11 ಮೇ 2022, 22:15 IST
Last Updated 11 ಮೇ 2022, 22:15 IST

ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಆರೋಪಿ ಮಂಜುನಾಥ ಮೇಳಕುಂದಿ ಈ ಮೊದಲು ಲೋಕೋಪಯೋಗಿ ಇಲಾಖೆಯ ಎಇ, ಜೆಇ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಸಿಕ್ಕಿಬಿದ್ದಿದ್ದ ‘ಬಂಧನಾವಧಿ’ಯಲ್ಲಿ 17 ದಿನ ವೈದ್ಯಕೀಯ ರಜೆ ಪಡೆದಿದ್ದ ಸಂಗತಿಯನ್ನು ಓದಿದಾಗ (ಪ್ರ.ವಾ., ಮೇ 9), ಯಾರಿಗೇ ಆಗಲಿ ಅವರನ್ನು ನಿಂದಿಸಬೇಕೆಂಬ ಮನಸ್ಸಾಗುವುದು ಸಹಜ. ಆದರೆ, ಅವರೊಬ್ಬರನ್ನೇ ನಿಂದಿಸುವುದರಲ್ಲಿ ಅರ್ಥವಿಲ್ಲ! ಅವರೇನೋ ಯಾರಿಗೂ ಗೊತ್ತಾಗದಂತೆ ದಸ್ತಗಿರಿಯಾಗಿ 17 ದಿನ ಜೈಲಿನಲ್ಲಿದ್ದು, ಹೊರಗೆ ಬಂದು ಬಂಧನದ ಬಗ್ಗೆ ಇಲಾಖೆಗೆ ಮಾಹಿತಿ ನೀಡದೆ, ವೈದ್ಯಕೀಯ ರಜೆಗೆ ಅರ್ಜಿ ಸಲ್ಲಿಸಿ ರಜೆ ಮಂಜೂರು ಮಾಡಿಸಿಕೊಂಡು ತಂತ್ರಗಾರಿಕೆ ಮೆರೆದಿದ್ದಾರೆ.

ಇಲ್ಲಿ ಅವರನ್ನು ದಸ್ತಗಿರಿ ಮಾಡಿದ ತನಿಖಾಧಿಕಾರಿಯು ದಸ್ತಗಿರಿಯ ವಿಚಾರವನ್ನು ಕೂಡಲೇ ಮೇಳಕುಂದಿ ಅವರ ಮೇಲಧಿಕಾರಿಗೆ ತಿಳಿಸುವುದು ಕಾನೂನಿನಲ್ಲಿ ಆದ್ಯ ಕರ್ತವ್ಯವಾಗಿತ್ತು. ಆದರೆ, ತನಿಖಾಧಿಕಾರಿ ಕಾನೂನಿನ ಸನ್ನಿವೇಶದಲ್ಲಿ (ಆರೋಪಿ ಹಿತರಕ್ಷಣೆ) ಮೈಮರೆತಿದ್ದ ಕಾರಣದಿಂದ ಅದನ್ನು ತಿಳಿಸಲಾಗಲಿಲ್ಲವೋ ಮೇಳಕುಂದಿ ಅವರೊಂದಿಗೆ ಷರೀಕರಾಗಿದ್ದ ಸಲುವಾಗಿ ತಿಳಿಸಲಿಲ್ಲವೋ ಅರ್ಥವಾಗದು. ಈ ಸಂಗತಿಯಲ್ಲಿ ಮೇಳಕುಂದಿ ಅವರನ್ನು ಮೀರಿಸುವಷ್ಟು ದೂಷಣಾರ್ಹರು ಯಾರೆಂದರೆ, ಅವರನ್ನು ದಸ್ತಗಿರಿ ಮಾಡಿ ಕೋರ್ಟ್ ಮುಂದೆ ಹಾಜರುಪಡಿಸಿ, ನಂತರ ಕಾರಾಗೃಹಕ್ಕೆ ಸದ್ದುಗದ್ದಲವಿಲ್ಲದೆ ಅವರು ಹೋಗಿ ಬರುವಂತೆ ನೋಡಿಕೊಂಡ ತನಿಖಾಧಿಕಾರಿ. ಇವರನ್ನು ಮಾತ್ರ ಕಾನೂನು ಕ್ಷಮಿಸುವುದಿಲ್ಲ.

ಸಿ.ಎಚ್‌.ಹನುಮಂತರಾಯ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.