ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದಲ್ಲಿ ಒಬ್ಬ ಬಡಕಲು ಹೆಂಗಸು ತನ್ನ ಸತ್ತ ಮಗುವಿನ ಹೆಣ ಹಿಡಿದುಕೊಂಡು ಅದರ ಹೆಸರಲ್ಲಿ ಭಿಕ್ಷೆ ಬೇಡುತ್ತಿದ್ದಳು. ಅದನ್ನು ಗಮನಿಸಿದ ಸ್ಥಳೀಯ ಅಂಗಡಿಗಳವರು ಪೊಲೀಸರನ್ನು ಕರೆಸಿ ಆಕೆಯನ್ನು ತೊಲಗಿಸಿದರು.
ಮೊನ್ನೆ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ನರೇಂದ್ರ ಮೋದಿಯವರು, ಯುವಜನರನ್ನು ಉದ್ದೇಶಿಸಿ ‘ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ತುತ್ತಾದ 43 ಜವಾನರ ಹೆಸರಲ್ಲಿ ಬಿಜೆಪಿಗೆ ಮತದಾನ ಮಾಡಿ ತಮ್ಮ ದೇಶಭಕ್ತಿ ತೋರಿಸಬೇಕು’ ಎಂದರು. ದೇಶಕ್ಕಾಗಿ ಹುತಾತ್ಮರಾಗಿರುವ ಯೋಧರ ಹೆಣ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವ ನಮ್ಮ ರಾಜಕಾರಣಿಗಳನ್ನು ನೋಡುವಾಗ ನನಗೆ, ಬಸ್ ನಿಲ್ದಾಣದಲ್ಲಿ ಸತ್ತ ಮಗುವನ್ನು ತೋರಿಸಿ ಭಿಕ್ಷೆ ಬೇಡುತ್ತಿದ್ದ ಆ ಮಹಿಳೆ ನೆನಪಿಗೆ ಬರುತ್ತಾಳೆ. ಮತ ಯಾಚಿಸುವಾಗ ವೀರ ಸೇನಾಪಡೆಯ ಹೆಸರು ಬಳಸುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಸಾರಿ ಸಾರಿ ಹೇಳಿದ್ದರೂ ಯಾರೂ ಇದಕ್ಕೆ ಸೊಪ್ಪು ಹಾಕುತ್ತಿಲ್ಲವೇಕೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.