ADVERTISEMENT

ನೀರಿನ ಗುಣಮಟ್ಟ ಕಾಪಾಡಲು ಕ್ರಮ ಜರುಗಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ನವೆಂಬರ್ 2019, 17:04 IST
Last Updated 18 ನವೆಂಬರ್ 2019, 17:04 IST

ಬೆಂಗಳೂರು ಸೇರಿದಂತೆ 13 ರಾಜ್ಯಗಳ ರಾಜಧಾನಿಗಳಲ್ಲಿ ಪೈಪ್ ಮೂಲಕ ಮನೆಗಳಿಗೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಶುದ್ಧವಲ್ಲ ಎಂದು ಭಾರತೀಯ ಗುಣಮಟ್ಟ ಮಾಪನ ಸಂಸ್ಥೆಯ (ಬಿಐಎಸ್) ಅಧ್ಯಯನ ವರದಿ ತಿಳಿಸಿದೆ (ಪ್ರ.ವಾ., ನ. 17).

ಆದರೆ ‘ಈಗಿನ ನಿಯಮದ ಪ್ರಕಾರ, ಪೈಪ್ ಮೂಲಕ ಸರಬರಾಜಾಗುವ ನೀರಿನ ಗುಣಮಟ್ಟದ ಮಾನದಂಡ ಕಾಪಾಡುವುದು ಕಡ್ಡಾಯವಲ್ಲ. ಆದ್ದರಿಂದ ಯಾರ ವಿರುದ್ಧವೂ ಕ್ರಮ ಸಾಧ್ಯವಿಲ್ಲ’ ಎಂದು ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಇದೊಂದು ಬಾಲಿಶ ಮತ್ತು ಬೇಜವಾಬ್ದಾರಿಯ ಹೇಳಿಕೆ. ಮನುಷ್ಯನ ಹಲವಾರು ರೋಗಗಳಿಗೆ ಅಶುದ್ಧ ಕುಡಿಯುವ ನೀರು ಕಾರಣವೆಂದು ವೈದ್ಯಕೀಯ ವರದಿಗಳು ಹೇಳುತ್ತವೆ. ನಗರ ಪ್ರದೇಶಗಳಲ್ಲಿ, ಉಳ್ಳವರು ಮಾತ್ರ ದುಬಾರಿ ಬೆಲೆಯ ಫಿಲ್ಟರ್ಅಳವಡಿಸಿಕೊಳ್ಳಬಹುದು. ಆದರೆ ಅದು ಸಾಧ್ಯವಾಗದ ಜನಸಾಮಾನ್ಯರು ಮತ್ತು ಕಾರ್ಮಿಕರ ಆರೋಗ್ಯದ ಮಟ್ಟ, ಜೀವನ ಮಟ್ಟದ ಬಗ್ಗೆ ಸಚಿವರು ಚಿಂತಿಸಬೇಡವೇ?

ಅಲ್ಲದೆ ಹೈನುಗಾರಿಕೆ, ಕುಕ್ಕುಟೋದ್ಯಮದಲ್ಲಿ ಶುದ್ಧ ನೀರನ್ನು ಜಾನುವಾರುಗಳಿಗೆ ನೀಡಲು ಸಾಧ್ಯವೇ? ಜಾನುವಾರುಗಳ ದೇಹ ಸೇರುವ ವಿಷಕಾರಿ ನೀರು, ಜಾನುವಾರುಗಳ ಉತ್ಪನ್ನವನ್ನು ಬಳಸುವ ಮನುಷ್ಯನ ದೇಹವನ್ನು ಪ್ರವೇಶಿಸಬಹುದು. ಹೋಟೆಲ್‌ಗಳ ಆಹಾರದಲ್ಲಿ, ತಂಪು ಪಾನೀಯಗಳಲ್ಲಿ, ಅಷ್ಟಲ್ಲದೆ ಮನೆಗಳಲ್ಲಿ ಸ್ನಾನಕ್ಕೆ ಬಳಸುವ ನೀರನ್ನೂ ಪ್ರತಿ ಬಾರಿ ಶುದ್ಧೀಕರಿಸಿ ಬಳಸಲು ಸಾಧ್ಯವೇ? ಆದ್ದರಿಂದ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಈಗಿರುವ ಕಾಯ್ದೆಗೆ ತಿದ್ದುಪಡಿ ತರಲು ಸಚಿವರು ಮುಂದಾಗಬೇಕು. ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿರುವವರ ವಿರುದ್ಧ
ನಿರ್ದಾಕ್ಷಿಣ್ಯವಾಗಿ ಕ್ರಮ‌ ಜರುಗಿಸಬೇಕು. ಶುದ್ಧ ನೀರು ಜನಸಾಮಾನ್ಯರ ಹಕ್ಕು. ಅದನ್ನು ಅವರಿಗೆ ನೀಡಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ADVERTISEMENT

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.