ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿ ಮತದಾರರಿಗೆ ಅಚ್ಚರಿ ಉಂಟುಮಾಡಿದ್ದಾರೆ. ಇದು ಬರೀ ಅಚ್ಚರಿಯಲ್ಲ, ರಾಜಕೀಯ ಮೌಲ್ಯಗಳ ಪತನದ ವಿಷಾದವೂ ಹೌದು. ಈ ರೀತಿಯ ಪಕ್ಷಾಂತರ ಚಟುವಟಿಕೆಗಳು ಅನೇಕ ರಾಜ್ಯಗಳಲ್ಲಿ ಯಾವ ನಾಚಿಕೆಯೂ ಇಲ್ಲದೆ ನಿರಂತರವಾಗಿ ನಡೆಯುತ್ತಲೇ ಇವೆ, ಇತ್ತೀಚಿನ ವರ್ಷಗಳಲ್ಲಿ ರೇಜಿಗೆ ಹುಟ್ಟಿಸುವ ಹಂತ ಮುಟ್ಟಿವೆ.
ಶಾಸಕರು ಗುಂಪು ಕಟ್ಟಿಕೊಂಡು ಪಕ್ಷಾಂತರ ಮಾಡಿದ್ದರಿಂದ ಕೆಲವು ರಾಜ್ಯಗಳಲ್ಲಿ ರಾಜಕೀಯವಾಗಿ ಅಲ್ಲೋಲಕಲ್ಲೋಲ ಆಗಿದ್ದುಂಟು. ಪಕ್ಷಾಂತರಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದೂ ಉಂಟು. ಆದರೂ ಪಕ್ಷಾಂತರ ಪಿಡುಗಿಗೆ ಯಾವುದೇ ಬಾಧಕ ಆಗಿಲ್ಲ. ಮತದಾರ ಒಬ್ಬ ಅಭ್ಯರ್ಥಿಯ ವ್ಯಕ್ತಿತ್ವ ಮತ್ತು ಆತ ಪ್ರತಿನಿಧಿಸುವ ಪಕ್ಷದ ಒಲವು–ನಿಲುವುಗಳನ್ನು ಗಮನಿಸಿ ತನ್ನ ಮತ ಚಲಾಯಿಸಿರುತ್ತಾನೆ. ಒಂದು ಪಕ್ಷದ ಚಿಹ್ನೆಯ ಮೇಲೆ ಆರಿಸಿಬಂದ ಬಳಿಕ, ಅವಧಿ ಪೂರೈಸುವ ಮೊದಲೇ ಮತ್ತೊಂದು ಪಕ್ಷಕ್ಕೆ ಜಿಗಿಯುವುದು ಮತದಾರನಿಗೆ ಮಾಡುವ ಅವಮಾನ.ಮತದ ಮೌಲ್ಯಕ್ಕೆ ಬಗೆದ ದ್ರೋಹ.
- ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.