ಬೀದರ್ ಜಿಲ್ಲೆಯಲ್ಲಿ ಕುಟುಂಬಗಳ ಸಂಖ್ಯೆಗಿಂತ ಪಡಿತರ ಕಾರ್ಡ್ಗಳ ಸಂಖ್ಯೆಯೇ ಹೆಚ್ಚಾಗಿದೆ ಎಂಬ ವರದಿಯಲ್ಲಿ (ಪ್ರ.ವಾ., ಅ. 17) ಆಶ್ಚರ್ಯಪಡುವಂತಹದ್ದು ಏನೂ ಇಲ್ಲ! ಏಕೆಂದರೆ ಪಡಿತರ ಚೀಟಿಯ ಬಹುದೊಡ್ಡ ಸಮಸ್ಯೆ ರಾಜ್ಯದಾದ್ಯಂತ ಇದೆ. ನಮ್ಮ ಸರ್ಕಾರಗಳು ದೊಡ್ಡ ಯೋಜನೆಗಳನ್ನು ಜಾರಿಗೆ ತರುವಲ್ಲಿ ತೋರುವ ಮುತುವರ್ಜಿಯನ್ನು ಆ ಯೋಜನೆಗಳು ಹಳ್ಳ ಹಿಡಿದರೆ ಅವುಗಳನ್ನು ಸರಿದಾರಿಗೆ ತರುವ ವಿಚಾರದಲ್ಲಿ ತೋರುವುದಿಲ್ಲ. ರಾಜ್ಯದಲ್ಲಿ ಎಷ್ಟೋ ಜನ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುವ ಸ್ಥಿತಿ ಇದೆ. ಇಂತಹ ಜನರಿಗೆ ಆಸರೆಯಾಗುವ ಪಡಿತರ ಯೋಜನೆ ಒಂದು ವರವೇ ಸರಿ.
ಕುಟುಂಬದ ವಾರ್ಷಿಕ ವರಮಾನದ ಆಧಾರದ ಮೇಲೆ ಎಪಿಎಲ್, ಬಿಪಿಎಲ್ ಎಂದು ವಿಂಗಡಿಸಿ ಆಹಾರ ಸಾಮಗ್ರಿಗಳನ್ನು ವಿತರಿಸುವುದು ಒಂದು ವೈಜ್ಞಾನಿಕ ವಿಧಾನ. ಇದರಲ್ಲೂ ಖದೀಮರು ನುಸುಳಿ ಬಡವರ ಅನ್ನಕ್ಕೆ ಕನ್ನ ಹಾಕುತ್ತಿರುವುದು ದುರಂತವೇ ಸರಿ. ಇವೆಲ್ಲ ನಮ್ಮ ಅಧಿಕಾರಿಗಳಿಗೆ ತಿಳಿಯದ ವಿಷಯಗಳೇನಲ್ಲ. ಆದರೂ ಅವರನ್ನು ಅದಾವ ಕಾಣದ ಕೈಗಳು ಕಟ್ಟಿಹಾಕಿವೆಯೋ ತಿಳಿಯದಾಗಿದೆ. ಸರ್ಕಾರ ಈಗಲಾದರೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ನಿಜವಾದ ಬಡವರಿಗೆ ಯೋಜನೆ ತಲುಪುವಂತೆ ಮಾಡಬೇಕು.
– ರಾಜು ಬಿ. ಲಕ್ಕಂಪುರ, ಜಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.