ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಿರುವುದು ಸ್ವಾಗತಾರ್ಹ. ಅದರಂತೆ ದೇಶದ ಎಲ್ಲ ರಾಜ್ಯಗಳಲ್ಲಿಯೂ ಬ್ರಾಹ್ಮಣೇತರ ಅರ್ಚಕರ ನೇಮಕಾತಿ ಮಾಡುವ ಆಗ್ರಹ ಪ್ರಗತಿಪರರಿಂದ ಕೇಳಿಬರುತ್ತಿದೆ. ಜಾತಿ ಸಮಾನತೆ ಎಷ್ಟು ಮುಖ್ಯವೊ ಲಿಂಗ ಸಮಾನತೆಯೂ ಅಷ್ಟೇ ಮುಖ್ಯ. ಮಹಿಳೆಯರನ್ನುಅರ್ಚಕರನ್ನಾಗಿ ನೇಮಕ ಮಾಡಿಕೊಳ್ಳುತ್ತಿಲ್ಲ. ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿದೆ. ಸಂವಿಧಾನ ನಮಗೆ ಲಿಂಗ ಸಮಾನತೆಯನ್ನು ಕೊಡಮಾಡಿದೆ. ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ ಅರ್ಚಕ ಹುದ್ದೆಗಳನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ನೆಲೆಯಾಗುತ್ತದೆ.
ಈಗಾಗಲೇ ಅನೇಕ ಮಹಿಳೆಯರು ಮದುವೆ-ಮುಂಜಿಗಳಲ್ಲಿ ಪೌರೋಹಿತ್ಯ ಮಾಡುತ್ತಿದ್ದಾರೆ. ಎಲ್ಲ ಕರ್ಮಾದಿಗಳನ್ನು ಮಾಡಿಸುತ್ತಿದ್ದಾರೆ. ವೇದಮಂತ್ರಗಳನ್ನು ಪಠಿಸುತ್ತಿದ್ದಾರೆ. ಹೀಗಾಗಿ ಅರ್ಚಕರಾಗುವ ಅರ್ಹತೆಮಹಿಳೆಯರಿಗೂ ಇದೆ. ಸೂಕ್ತ ತರಬೇತಿ ನೀಡಿದರೆ ಅವರೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಚಕ ವೃತ್ತಿಗೆ ಬರಬಹುದು. ವೇದಮಂತ್ರಗಳನ್ನು ರಚಿಸಿದವರಲ್ಲಿ ಗಾರ್ಗಿ, ಮೈತ್ರೇಯಿ ಅವರಂತಹ ಮಹಿಳೆಯರೂ ಸೇರಿದ್ದಾರೆ. ರಾಜ್ಯ ಸರ್ಕಾರಗಳು ಲಿಂಗ ಸಮಾನತೆಯನ್ನು ಎತ್ತಿ ಹಿಡಿಯಬೇಕು, ಪೂರ್ವಗ್ರಹವನ್ನು ತೊರೆದು ಪ್ರತಿರೋಧವನ್ನು ಲೆಕ್ಕಿಸದೆ, ಪೌರೋಹಿತ್ಯ ನಿರ್ವಹಣೆಗೆ ಬೇಕಾದ ಆಸಕ್ತಿ ಮತ್ತು ಕೌಶಲವನ್ನು ಹೊಂದಿರುವ ಮಹಿಳೆಯರನ್ನು
ಅರ್ಚಕರನ್ನಾಗಿ ನೇಮಿಸಬೇಕು. ಅರ್ಚಕ ಹುದ್ದೆಗಳು ಜಾತ್ಯತೀತ, ಲಿಂಗನಿರಪೇಕ್ಷ ನೆಲೆಯಲ್ಲಿ ನೇಮಕಗೊಳ್ಳಬೇಕು.
-ಸಾವಿತ್ರಿ ಮುಜುಮದಾರ, ಕೊಪ್ಪಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.