‘ಕನ್ನಡಕ್ಕೆ ಬೇಕು ಪ್ರೀತಿಯ ಆರೈಕೆ’ ಎಂದು ಡಾ. ಜ್ಯೋತಿ ಹೇಳಿದ್ದಾರೆ (ಸಂಗತ, ಅ. 29). ಕೆಲವಾರು ವರ್ಷಗಳಿಂದ ಕನ್ನಡದ ಧ್ವನಿ, ಅದರಲ್ಲೂ ಬೆಂಗಳೂರಿನಲ್ಲಿ ದುರ್ಬಲವಾಗಿಬಿಟ್ಟಿದೆ, ಕರ್ನಾಟಕದಲ್ಲಿ ಪ್ರಾದೇಶಿಕ ಅಸ್ಮಿತೆಯ ಕಳಕಳಿ ಕಡಿಮೆ ಇದೆ ಎಂಬ ಅವರ ಕಳವಳ ಸತ್ಯದ ಮಾತು. ಆದರೆ, ಕನ್ನಡಕ್ಕೆ ಹೋರಾಟಕ್ಕಿಂತ ಪ್ರೀತಿಯ ಆರೈಕೆ ಅಗತ್ಯ ಎಂಬ ಅವರ ಅಭಿಪ್ರಾಯ ಸ್ವಲ್ಪಮಟ್ಟಿಗೆ ಮಾತ್ರ ಸರಿ ಎನಿಸುತ್ತದೆ. 80ರ ದಶಕದ ಗೋಕಾಕ್ ಚಳವಳಿ ಮಾದರಿಯ ಕನ್ನಡಪರ ಹೋರಾಟ, ಈಗ ಕನ್ನಡಕ್ಕೆ ಬಂದಿರುವ ದುಃಸ್ಥಿತಿಯ ಸನ್ನಿವೇಶದಲ್ಲಿ ಅಗತ್ಯ ಎನಿಸುತ್ತದೆ. ಅದರಲ್ಲೂ ಈಗ ಹಿಂದಿ ಹೇರಿಕೆಯ ಹುನ್ನಾರದ ವಿರುದ್ಧ ಹೋರಾಡಿ ಕನ್ನಡವನ್ನು ನಮ್ಮ ರಾಜ್ಯದಲ್ಲೇ ಉಳಿಸಿಕೊಳ್ಳಬೇಕಾಗಿ ಬಂದಿರುವುದು ದುರ್ದೈವ ಮತ್ತು ಅನಿವಾರ್ಯ ಕೂಡ.
ಕೇಂದ್ರ ಸರ್ಕಾರವು ಹಿಂದಿ ಹೇರಿಕೆಯನ್ನು ಮುಂದುವರಿಸಿದ್ದರೂ ನಮ್ಮ ಸಂಸದರು ಮತ್ತು ರಾಜ್ಯ ಮಂತ್ರಿಗಳು ಚಕಾರ ಎತ್ತದಿರುವುದು ಸೋಜಿಗದ ಸಂಗತಿ. ನವೆಂಬರ್ ತಿಂಗಳಲ್ಲಿ ಮಾತ್ರವಲ್ಲದೆ, ಎಲ್ಲ ಮಾಸಗಳಲ್ಲೂ ಕನ್ನಡದ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ. ಹಿಂದಿ ಹೇರಿಕೆಯನ್ನು ತಮಿಳುನಾಡು ಸತತವಾಗಿ ವಿರೋಧಿಸುತ್ತಿದೆ. ಈ ವಿಷಯದಲ್ಲಿ ನಾವು ಹಿಂದೆ ಬಿದ್ದಿರುವ ಬಗ್ಗೆಯೂ ಲೇಖಕರು ಬೆಳಕು ಚೆಲ್ಲಿದ್ದರೆ ಸಂದರ್ಭೋಚಿತವಾಗಿರುತ್ತಿತ್ತು.
ಎಚ್.ವಿ.ಶ್ರೀಧರ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.