ADVERTISEMENT

ಬಡ್ತಿ ಮೀಸಲು: ದಾಖಲಾರ್ಹ ತೀರ್ಪು

​ಪ್ರಜಾವಾಣಿ ವಾರ್ತೆ
Published 12 ಮೇ 2019, 16:57 IST
Last Updated 12 ಮೇ 2019, 16:57 IST

ಬಡ್ತಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು (ಪ್ರ.ವಾ., ಮೇ 11) ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಯಾಕೆಂದರೆ ಎಸ್‌ಸಿ–ಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಷಯವನ್ನು ಸಂವಿಧಾನದ 16(4)(ಎ) ವಿಧಿ ಬಹಳ ಸ್ಪಷ್ಟವಾಗಿ ದಾಖಲಿಸುತ್ತದೆ. ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತುಅನುಸೂಚಿತ ಬುಡಕಟ್ಟುಗಳವರು ಸಾಕಷ್ಟು ಪ್ರಾತಿನಿಧ್ಯ ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ, ಯಾವುದೇ ವರ್ಗದ ಅಥವಾ ವರ್ಗಗಳ ಹುದ್ದೆಗಳಿಗೆ, ತತ್ಪರಿಣಾಮದ ಜ್ಯೇಷ್ಠತೆಯೊಂದಿಗೆ ಬಡ್ತಿ ವಿಷಯದಲ್ಲಿ ಮೀಸಲಾತಿಯ ಯಾವುದೇ ಉಪಬಂಧವನ್ನು ಮಾಡಲು ರಾಜ್ಯಕ್ಕಿರುವ ಅಧಿಕಾರವನ್ನು ಪ್ರತಿಬಂಧಿಸತಕ್ಕದಲ್ಲ ಎಂದು ಹೇಳುತ್ತದೆ.

ಸಂವಿಧಾನದ ನಿಲುವುಗಳು ಇಷ್ಟೊಂದು ಸ್ಪಷ್ಟವಾಗಿರುವಾಗ ಎಸ್‌ಸಿ– ಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸುವುದು ಯಾರಿಗಾದರೂ ಹೇಗೆ ತಾನೇ ಸಾಧ್ಯ?ಹಾಗೇ ಈ ಸಂದರ್ಭದಲ್ಲಿ ಎಸ್‌ಸಿ– ಎಸ್‌ಟಿಗಳ ಬಡ್ತಿ ಮೀಸಲು ವಿರೋಧಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವವರು ಗಮನಿಸಬೇಕಾದ ವಿಷಯ ‘ಇನ್ನೊಬ್ಬರಿಗೇಕೆ ಕೊಟ್ಟಿದ್ದೀರಿ ಎನ್ನುವ ಬದಲು ನಮಗೆ ಏಕೆ ಕೊಟ್ಟಿಲ್ಲ ಎಂದು ಕೇಳುವುದು ಸೂಕ್ತ’ ಎಂಬುದು. ಅಂದರೆ ಎಸ್‌ಸಿ– ಎಸ್‌ಟಿಗಳಂತೆ ಹಿಂದುಳಿದ ವರ್ಗಗಳಿಗೂ (ಒಬಿಸಿಗಳು) ಮಂಡಲ್ ವರದಿಯು ಉದ್ಯೋಗ ನೇಮಕಾತಿಯಲ್ಲಿ ಶೇ 27ರಷ್ಟು ಮೀಸಲು ನೀಡುತ್ತದೆ. ಅಂದಹಾಗೆ ಈ ವರ್ಗಗಳವರು ‘ನಮಗೆ ನೇಮಕದಲ್ಲಿ ಮೀಸಲು ನೀಡಿರುವಂತೆ ಬಡ್ತಿಯಲ್ಲೂ ನೀಡಿ’ ಎಂದು ಸರ್ಕಾರವನ್ನು ಒತ್ತಾಯಿಸಿದರೆ ಸಮಸ್ಯೆಯೇ ಇರದು! ಆದ್ದರಿಂದ ಈಗ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಅಕ್ಷರಶಃ ಮಾದರಿಯಾದುದು.
ರಘೋತ್ತಮ ಹೊ.ಬ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT