ರಾಜಧಾನಿ ಬೆಂಗಳೂರು ನಗರ ಇಂದಿಗೂ ಮೂಲ ಸೌಕರ್ಯಗಳ ಕೊರತೆಯಿಂದ ಮುಕ್ತವಾಗಿಲ್ಲ. ಕಾಲಕಾಲಕ್ಕೆ ತೊಳೆದುಕೊಂಡು ಹೋಗುವ ರಸ್ತೆಗಳನ್ನು ಹಾಕಲು ಆಡಳಿತವು ಸಮರಸಿದ್ಧ ಸ್ಥಿತಿಯಲ್ಲಿ ಇರುತ್ತದೆ. ದೀರ್ಘಾವಧಿ ಬಾಳಿಕೆ ಬರುವ ರಸ್ತೆಗಳು ಬೆಂಗಳೂರಿನಲ್ಲಿ ಇಲ್ಲ. ಪ್ರತೀ ರಸ್ತೆಯಲ್ಲೂ ಅವೈಜ್ಞಾನಿಕವಾದ ಉಬ್ಬುಗಳು, ದೊಡ್ಡ ದೊಡ್ಡ ಗುಂಡಿಗಳು ಇವೆ. ಪ್ರತೀ ಮಳೆಗಾಲದಲ್ಲಿ ರಾಜಕಾಲುವೆಗಳು ಉಕ್ಕಿ ಹರಿಯುತ್ತವೆ.
ಬೆಂಗಳೂರಿನ ಬೆಳವಣಿಗೆಯ ವೇಗಕ್ಕೆ ಯೋಜನಾಬದ್ಧವಾಗಿ ಕೆಲಸ ನಿರ್ವಹಿಸುವ ಆಡಳಿತಗಾರರ ಕೊರತೆಯಿದೆ. ದೀರ್ಘಾವಧಿಯ ಬಗ್ಗೆ ಯೋಚಿಸದೆ ಬರೀ ತೇಪೆ ಹಾಕುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ರಾಜಕಾಲುವೆ ಅಭಿವೃದ್ಧಿಗಾಗಿ ₹1,556 ಕೋಟಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಸದ್ಯಕ್ಕೆ ಈ ಉದ್ದೇಶಕ್ಕೆ ₹ 411.31 ಕೋಟಿಯನ್ನು ಮಾತ್ರ ಬಳಸಿಕೊಳ್ಳಲು ಸಿದ್ಧತೆ ನಡೆಸಿರುವುದು (ಪ್ರ.ವಾ., ಫೆ. 14) ದುರದೃಷ್ಟಕರ.
ಈ ಬಾರಿಯ ಮಳೆಗಾಲದಲ್ಲಿ ಕೆರೆಗಳು ಕೋಡಿ ಬಿದ್ದು ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದದ್ದನ್ನು ಸರ್ಕಾರ ಮರೆ ತಂತಿದೆ. ಹಣಕಾಸಿನ ಲಭ್ಯತೆಯ ನೆಪವೊಡ್ಡಿ ಇಂತಹ ಕಾಮಗಾರಿಗೆ ನಿಗದಿಯಾದ ಹಣವನ್ನು ಮೊಟಕುಗೊಳಿಸಿ, ಕ್ರಿಯಾಯೋಜನೆಯನ್ನು ಸಂಕ್ಷಿಪ್ತಗೊಳಿಸುವುದರಿಂದ ಸಮಸ್ಯೆಗಳು ಪುನರಾವರ್ತನೆಯಾಗುತ್ತವೆ. ಈ ದಿಸೆಯಲ್ಲಿ ಸರ್ಕಾರ ದೃಢನಿಲುವು ತಾಳಿ, ನಿಗದಿಪಡಿಸಿದ್ದಷ್ಟು ಹಣವನ್ನು ಕೊಟ್ಟು ನಗರದ ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ.
- ರಿಪ್ಪನ್ಪೇಟೆ ನಟರಾಜ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.