ತಳ್ಳುಗಾಡಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಬೇಕೆಂಬ ಮಣ್ಣೆ ಮೋಹನ್ ಅವರ ಅಭಿಪ್ರಾಯ(ವಾ.ವಾ., ಏ. 8) ಸಮಯೋಚಿತವಾಗಿದೆ. 15– 20 ವರ್ಷಗಳ ಹಿಂದೆ ನಮ್ಮಂತಹ ಸಾವಿರಾರು ಗೃಹಿಣಿಯರು, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುವ ಸಂದರ್ಭ. ನಮ್ಮ ಬಡಾವಣೆಗಳಿಗೆ ಹೊಂದಿಕೊಂಡಂತಹ ಹಳ್ಳಿಗಳ, ತೋಟದ ಮನೆಗಳ ರೈತರು ತಾವು ಬೆಳೆದ ತರಕಾರಿಗಳನ್ನು ಮಾರಲು ತರುತ್ತಿದ್ದರು. ಯಾವ ಹಿಂಜರಿಕೆಯೂ ಇಲ್ಲದೆ ನಾವೆಲ್ಲ ನಿರಾಳವಾಗಿ ಕೊಂಡು ತಿನ್ನುತ್ತಿದ್ದೆವು.
ಬೆಂಗಳೂರು ಬೆಳೆದಂತೆ ಹಳ್ಳಿಗಳು, ತೋಟದ ಮನೆಗಳೆಲ್ಲ ಬಿಲ್ಡರ್ಗಳ ಪಾಲಾಗಿ, ಅಪಾರ್ಟ್ಮೆಂಟ್ಗಳು
ತಲೆಯೆತ್ತಿ, ಜನಸಂಖ್ಯೆ ಹೆಚ್ಚಿದಂತೆ ನಾನಾ ರೀತಿಯ, ನಾನಾ ಭಾಷೆಯ, ನಾನಾ ವೇಷದ ಜನರೆಲ್ಲಾ ತರಕಾರಿ ಮಾರಲು ಬರತೊಡಗಿದರು. ಅದರ ಮರೆಯಲ್ಲಿ ಕೆಲವು ಕಂಟಕರು ಒಂಟಿ ಮನೆಗಳು, ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿಯ ವೇಳೆ ಕಳ್ಳತನ ಮಾಡುವುದು, ಬಾಯಾರಿಕೆಯಂತೆ ನಟಿಸಿ, ಅನುಕಂಪ ಗಿಟ್ಟಿಸಿ, ನೀರು ತರಲು ಒಳ ಹೋದಾಗ ಹಿಂಬಾಲಿಸಿ ಬಂದು ಚಿನ್ನಾಭರಣ ದೋಚುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಹಾಗಾಗಿ, ತರಕಾರಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದರೆ, ಸರ್ಕಾರದಿಂದ ಅನುಮತಿ ಪಡೆದ ವ್ಯಕ್ತಿಗಳು ಎಂಬ ನಂಬಿಕೆಯಿಂದ ನಾವೆಲ್ಲ ನಿರಾಳವಾಗಿ ತರಕಾರಿ ಖರೀದಿಸಬಹುದು.
- ನೇತ್ರಾವತಿ, ಸುನೀತಾ, ಅಂಬುಜಾ, ಲತಾ, ಪ್ರೀತಿ, ಶಶಿಕಲಾ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.