ಕನ್ನಡ ಮಾತೃಭಾಷೆಯಲ್ಲದ ಸರ್ಕಾರಿ ಉರ್ದು ಶಾಲೆಗಳ ಮಕ್ಕಳಿಗೆ ಕನ್ನಡ ಕಲಿಸುವುದು ಸವಾಲಿನ ಕೆಲಸವೆಂದೂ ಕನ್ನಡೇತರ ಮಕ್ಕಳಿಗೆ ಕನ್ನಡ ಕಲಿಸುವ ಇಂತಹ ಕನ್ನಡ ಶಿಕ್ಷಕರನ್ನು ಗುರುತಿಸಿ ಪ್ರೊತ್ಸಾಹಿಸಬೇಕೆಂದೂಡಾ. ಗುರುಪ್ರಸಾದ ಎಚ್.ಎಸ್. ಹೇಳಿದ್ದಾರೆ (ಪ್ರ.ವಾ., ಡಿ. 7). ಕನ್ನಡ ಭಾಷೆಯನ್ನು ಶಾಲೆಗೆ ಬರುವವರೆಗೆ ಕೇಳಿರದ, ಮಾತನಾಡಿರದ ಮಕ್ಕಳಿಗೆ ಕನ್ನಡ ಕಲಿಸುವುದು ಸವಾಲಿನ ಕೆಲಸವಾಗಿರುವಂತೆ, ಇಂಗ್ಲಿಷ್ ಭಾಷೆಯನ್ನೋ ಹಿಂದಿ ಭಾಷೆಯನ್ನೋ ಶಾಲೆಗೆ ಬರುವವರೆಗೆ ಕೇಳಿರದ, ಮಾತನಾಡಿರದ ಮಕ್ಕಳಿಗೆ ಈ ಭಾಷೆಗಳನ್ನು ಕಲಿಸುವುದೂ ಸವಾಲಿನ ಕೆಲಸವೇ. ಮಹಾರಾಷ್ಟ್ರದ ಗಡಿಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕ ರಂಜಿತ್ಸಿಂಹ ದಿಸಳೆಯವರಿಗೆ ಜಾಗತಿಕ ಪ್ರಶಸ್ತಿ ಬಂದಿರುವುದನ್ನು ಉದಾಹರಿಸಿ ಅವರು ಈ ಪತ್ರ ಬರೆದಿದ್ದಾರೆ.
ದಿಸಳೆಯವರಿಗೆ ಜಾಗತಿಕ ಪ್ರಶಸ್ತಿ ಬಂದಿರುವುದು ಅವರು ಮರಾಠಿ ಮಾತೃಭಾಷೆಯ ಮಕ್ಕಳಿಗೆ ಕನ್ನಡ ಕಲಿಸಿದ್ದಾರೆ ಎಂಬ ಕಾರಣಕ್ಕೆ ಅಲ್ಲ. ಅವರು ಭಾಷಾ ಬೋಧನೆಯಲ್ಲಿ ಹೊಸ ಪ್ರಯೋಗ ಜಾರಿಗೆ ತಂದಿದ್ದಾರೆ ಎಂಬ ಕಾರಣಕ್ಕೆ. ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ, ಅವರ ಹೊಸ ಆಲೋಚನಾ ಕ್ರಮಕ್ಕೆ ಹಾಗೂ ಅವರ ವಿನೂತನ ಪ್ರಯೋಗಕ್ಕೆ. ಕ್ಯುಆರ್ ಕೋಡ್ನಲ್ಲಿ ಪಠ್ಯ ಅಳವಡಿಸಿರುವ ದಿಸಳೆಯವರ ಕ್ರಮ ದೇಶದಾದ್ಯಂತ ಶಿಕ್ಷಣ ತಜ್ಞರ ಗಮನ ಸೆಳೆದಿದೆ ಎಂಬುದು ಗಮನಾರ್ಹ.
- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.