ರಾಜ್ಯದಲ್ಲಿ ಬಿಜೆಪಿಯಿಂದ ಗೆದ್ದಿರುವ ಶಾಸಕರಲ್ಲಿ 16 ಮಂದಿ ಲಿಂಗಾಯತ ಸಮುದಾಯದವರು. ಅವರಲ್ಲಿ ಕನಿಷ್ಠ ನಾಲ್ವರಿಗೆ ಮಂತ್ರಿ ಪದವಿ ಕೊಡುವಂತೆ ಆ ಸಮುದಾಯದವರು ಮುಖ್ಯಮಂತ್ರಿಯಲ್ಲಿ ಬೇಡಿಕೆ ಇಟ್ಟಿದ್ದಾರೆ.
ಒಂದು ಪಕ್ಷದ ಸರ್ಕಾರವನ್ನು ಉರುಳಿಸುವಲ್ಲಿ ಮತ್ತು ಮತ್ತೊಂದು ಪಕ್ಷ ಚುಕ್ಕಾಣಿ ಹಿಡಿಯುವಂತೆ ಮಾಡುವಲ್ಲಿ ಬೆಳಗಾವಿ ಜಿಲ್ಲೆ ಶಾಸಕರ ಪಾತ್ರ ಹೆಚ್ಚಿನದು; ಆ ಕಾರಣ, ಆ ಜಿಲ್ಲೆಗೆ ನಾಲ್ಕು ಮಂತ್ರಿ ಪದವಿಗಳನ್ನು ನೀಡಬೇಕೆಂದು ಆ ಜಿಲ್ಲೆಯ ಹಿರಿಯ ಧುರೀಣರೊಬ್ಬರು ಒತ್ತಾಯಿಸುತ್ತಿದ್ದಾರೆ. ಇನ್ನು ಯಾರು, ಯಾವ ರೀತಿ ಬೇಡಿಕೆ ಮಂಡಿಸಿದ್ದಾರೋ ತಿಳಿಯದು.
ಸಚಿವ ಸ್ಥಾನ ಕೆಲವರ ಗುತ್ತಿಗೆಯೇ ಎನ್ನುವ ಅನುಮಾನ ಈಗ ಬರುತ್ತಿದೆ. ಯಾವುದೋ ನೆಪದಲ್ಲಿ ಮಂತ್ರಿಮಂಡಲ ರಚನೆ ಕಾರ್ಯ ಮುಂದಕ್ಕೆ ಹೋಗುತ್ತಿದ್ದು, ಸಚಿವ ಸಂಪುಟ ರಚನೆ ಪ್ರಕ್ರಿಯೆಯು ದೋಸ್ತಿ ಸರ್ಕಾರದ ಹಾದಿಯಲ್ಲೇ ಹೋಗುತ್ತಿರುವಂತೆ ಕಾಣುತ್ತಿದೆ. ಸರ್ಕಾರ ನಿಭಾಯಿಸುವುದು ಯಡಿಯೂರಪ್ಪನವರಿಗೂ ಸುಲಭವಲ್ಲ ಎನ್ನುವ ರಾಜಕೀಯ ಪಂಡಿತರ ಭವಿಷ್ಯ ನಿಜವಾಗುವ ಲಕ್ಷಣಗಳು ಕಾಣುತ್ತಿವೆ.
-ರಮಾನಂದ ಶರ್ಮಾ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.