ವಾಚಕರ ವಾಣಿ
ಕಾಲದ ಕೇಡು ಎನ್ನೋಣವೇ?
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತಮ್ಮ ಲೇಖನದಲ್ಲಿ (ಪ್ರ.ವಾ., ಜೂನ್ 24) ತುರ್ತು ಪರಿಸ್ಥಿತಿಯ ಕಾಲಘಟ್ಟವನ್ನು ನೆನಪಿಸಿಕೊಂಡಿದ್ದಾರೆ. ತುರ್ತು ಪರಿಸ್ಥಿತಿಯು ದೇಶದ ಪ್ರತಿಯೊಬ್ಬ ರಾಜಕೀಯ ವಿದ್ಯಾರ್ಥಿಯು ಅಧ್ಯಯನ ಮಾಡಬೇಕಾದ ‘ಕರಾಳ ಅಧ್ಯಾಯ’ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಕೇವಲ ಅಧ್ಯಯನದ ದೃಷ್ಟಿಯಿಂದ ನೋಡಿದರೆ ಸಾಕೆ? ಅದರ ಐತಿಹಾಸಿಕ ಮಾಹಿತಿ ತಿಳಿದುಕೊಂಡು ಏನು ಮಾಡಬೇಕಿದೆ? ಕೇಂದ್ರದಲ್ಲಿನ ಬಿಜೆಪಿ ಆಡಳಿತವೂ ‘ಅಘೋಷಿತ ತುರ್ತು ಪರಿಸ್ಥಿತಿ’ಯಾಗಿದೆ ಎಂದು ಹೇಳಲಾಗುತ್ತಿದೆಯಲ್ಲ? ಇವತ್ತಿನ ಆಡಳಿತದ ವೈಖರಿ ಹಾಗೂ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಮುಖಾಮುಖಿ ಮಾಡಲು ಯಾಕೆ ಹಿಂಜರಿದಿದ್ದಾರೆ? ತುರ್ತು ಪರಿಸ್ಥಿತಿಯಿಂದ ಇತರ ಆಡಳಿತ ಪಕ್ಷಗಳು ಏನನ್ನು ಕಲಿತಿವೆ ಅಥವಾ ಕಲಿಯುತ್ತಿವೆ? ಏನನ್ನೂ ಕಲಿಯುತ್ತಿಲ್ಲವೆಂದರೆ; ಅಂತಹ ಸ್ಥಿತಿಯ ಪುನರಾವರ್ತನೆಯಾಗುತ್ತಿದೆ ಎಂದರೆ ಭೂತವನ್ನು ತೋರಿಸಿ ವರ್ತಮಾನವನ್ನು ಮರೆಮಾಚುವುದು ಸುರೇಶ್ ಕುಮಾರ್ ಅವರಂತಹವರಿಗೆ ಆತ್ಮವಂಚನೆ ಎನಿಸುವುದಿಲ್ಲವೇ?
ತುರ್ತು ಪರಿಸ್ಥಿತಿ ವೇಳೆ ನೋವು ಅನುಭವಿಸಿದ್ದು ದೇಶಭಕ್ತಿ ಸರಿ. ಆದರೆ, ವರ್ತಮಾನದ ಆಡಳಿತ ಕುರಿತು ಮಾತನಾಡದಿರುವ ಮೌನ ದೇಶಭಕ್ತಿಯೇ? ಕಾಂಗ್ರೆಸ್ ಪಕ್ಷದ ತುರ್ತು ಪರಿಸ್ಥಿತಿಯ ಕನ್ನಡಿಯಲ್ಲಿ ಬಿಜೆಪಿ ಆಡಳಿತದ ಚಿತ್ರ ಕಾಣುತ್ತಿದೆಯಲ್ಲ. ಅದನ್ನು ನೋಡಲು ನೈತಿಕತೆ, ಆತ್ಮಸಾಕ್ಷಿ ಜೀವಂತ ಇರಬೇಡವೇ? ಅನ್ಯರ ತಪ್ಪು ತೋರಿ, ತಮ್ಮ ತಪ್ಪು ಮರೆಮಾಚುವುದನ್ನು ಕಾಲದ ಕೇಡು ಎನ್ನೋಣವೇ?
- ದೊಡ್ಡಿಶೇಖರ್, ಆನೇಕಲ್
‘ಪ್ರಜಾವಾಣಿ’ಗೆ ಅಭಿನಂದನೆ
ಆರು ವರ್ಷದ ಹಿಂದೆ ‘ಪ್ರಜಾವಾಣಿ’ಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ನನ್ನ ಕಥೆ ‘ಪಂಜರ’ಕ್ಕೆ ಬಹುಮಾನ ಬಂದಿತ್ತು. ಆ ಕಥೆ ಭಾನುವಾರದ ಪುರವಣಿಯಲ್ಲಿ ಪ್ರಕಟವಾದಾಗ ಇಬ್ಬರು ಸಿನಿಮಾ ನಿರ್ದೇಶಕರು ‘ಪ್ರಜಾವಾಣಿ’ ಕಚೇರಿಯಿಂದ ನನ್ನ ಮೊಬೈಲ್ ನಂಬರ್ ಪಡೆದು ನನಗೆ ಫೋನ್ ಮಾಡಿ, ‘ಪಂಜರ’ ಕಥೆ ಆಧಾರಿತ ಸಿನಿಮಾ ಮಾಡುತ್ತೇವೆ; ಅನುಮತಿ ಕೊಡಿ ಎಂದು ಕೇಳಿದ್ದರು. ಅಪರಿಚಿತ ಹೆಸರು ಕೇಳಿ ನಾನು ಅನುಮತಿ ಕೊಡಲಿಲ್ಲ. ಆಮೇಲೆ ಹಂಸಲೇಖ ಅವರಿಂದ ಫೋನ್ ಕರೆ ಬಂತು. ನಾನು ಅವರ ಭೇಟಿಗಾಗಿ ಬೆಂಗಳೂರಿಗೆ ಹೋದೆ. ಅವರಿಗೆ ನನ್ನ ಕಥೆ ಇಷ್ಟವಾಗಿತ್ತು. ಅದನ್ನು ಆಧರಿಸಿ ಸಿನಿಮಾ ಮಾಡಲು ಅನುಮತಿ ಕೇಳಿದಾಗ ಒಪ್ಪಿಗೆ ನೀಡಿದೆ. ಈಗ ನನ್ನ ಕಥೆ ‘ಓಕೆ’ ಹೆಸರಿನಡಿ ಹಂಸಲೇಖ ಅವರ ನಿರ್ದೇಶನದಲ್ಲಿಯೇ ನಿರ್ಮಾಣವಾಗುತ್ತದೆ. ಇದಕ್ಕಾಗಿ, ‘ಪ್ರಜಾವಾಣಿ’ಗೆ ನಾನು ಆಭಾರಿಯಾಗಿದ್ದೇನೆ.
- ಅದೀಬ್ ಅಖ್ತರ್, ಬನ್ನೂರು
ವಿದ್ಯಾರ್ಥಿಗಳಿಗೆ ವಿಮೆ ಸ್ವಾಗತಾರ್ಹ
ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ವುತ್ತಿದೆ. ಈ ನಡುವೆಯೇ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆಯನ್ನು ಕಡ್ಡಾಯಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ (ಪ್ರ.ವಾ., ಜೂನ್ 25). ಹೃದಯಾಘಾತದ ಬಗ್ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಸರ್ಕಾರ ಮುಂದಾಗಬೇಕಿದೆ.
- ಸುಮಾ ವೀಣಾ, ಹುಲಿಕಲ್
ಪಾಕ್ ನಟಿಗೆ ಮಣೆ ಏಕೆ?
ಭಾರತವು ‘ಆಪರೇಷನ್ ಸಿಂಧೂರ’ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಿತು. ಈ ಕಾರ್ಯಾಚರಣೆಯನ್ನು ಪಾಕಿಸ್ತಾನದ ನಟಿ ಹನಿಯಾ ಅಮಿರ್ ಟೀಕಿಸಿದ್ದರು. ಸದ್ಯ ಈ ನಟಿ ಪಂಜಾಬಿ ನಟ ಮತ್ತು ಗಾಯಕ ದಿಲ್ಜಿತ್ ದೊಸಾಂಜ್ ನಟಿಸಿ ನಿರ್ಮಿಸಿರುವ ‘ಸರ್ದಾರ್ ಜಿ3’ ಸಿನಿಮಾದಲ್ಲಿ ನಟಿಸಿದ್ದು, ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ.
‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ ಸಿನಿಮಾ ಬಿಡುಗಡೆ ಮಾಡಬಾರದು. ಚಿತ್ರ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇಷ್ಟಕ್ಕೂ ಭಾರತದ ವಿರುದ್ಧ ಹೇಳಿಕೆ ನೀಡಿ ಇಲ್ಲಿನವರ ಆಕ್ರೋಶಕ್ಕೆ ಕಾರಣರಾಗುವ ಪಾಕಿಸ್ತಾನದ ನಟಿಗೆ ಅವಕಾಶ ನೀಡಿ ಸಿನಿಮಾ ನಿರ್ಮಿಸುವ ಅಗತ್ಯ ಏನಿದೆ?
- ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು
‘ಇಂದಿರಾ ಕಿಟ್’: ಒಳ್ಳೆಯ ನಿರ್ಧಾರ
ಪಡಿತರ ಚೀಟಿದಾರರಿಗೆ ಪೌಷ್ಟಿಕ ಪದಾರ್ಥಗಳನ್ನು ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವು ಉತ್ತಮವಾದುದು (ಪ್ರ.ವಾ., ಜೂನ್ 24). ಪಡಿತರ ಅಕ್ಕಿಯು ಕಾಳಸಂತೆಯ ಪಾಲಾಗುವುದನ್ನು ತಡೆಯಲು ಪೌಷ್ಟಿಕ ಪದಾರ್ಥ ನೀಡಲು ಮುಂದಾಗಿರುವುದು ಸೂಕ್ತವಾಗಿದೆ. ಇದರಿಂದ ಸರ್ಕಾರಕ್ಕೂ ಹಣ ಉಳಿತಾಯವಾಗಲಿದೆ. ಕಾಳಸಂತೆ ವ್ಯವಹಾರಕ್ಕೆ ಕಡಿವಾಣ ಹಾಕಲು ಸರ್ಕಾರವು ಮತ್ತಷ್ಟು ಕ್ರಮವಹಿಸಬೇಕಿದೆ.
- ಮುಳ್ಳೂರ ಬಸಪ್ಪ ಎಸ್. ಹಲಗತ್ತಿ, ರಾಮದುರ್ಗ
ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿ
ಪುಸ್ತಕ ಓದುವ ಹವ್ಯಾಸ ಈಗ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಲು ಪ್ರತಿ ಶಾಲಾ– ಕಾಲೇಜು, ಬಸ್ ನಿಲ್ದಾಣ, ರೈಲು ನಿಲ್ದಾಣ, ದೇವಸ್ಥಾನದ ಮುಂದೆ ಸಂಚಾರ ಗ್ರಂಥಾಲಯಕ್ಕೆ ಚಾಲನೆ ನೀಡಬೇಕಿದೆ. ವಾರಕ್ಕೆ ಮೂರು ದಿನವಾದರೂ ಈ ಗ್ರಂಥಾಲಯ ಚಾಲನೆಯಲ್ಲಿರಬೇಕು. ಎಲ್ಲಾ ವಯೋಮಾನದ ಮಕ್ಕಳಿಗೂ ಪುಸ್ತಕಗಳು ಲಭ್ಯವಿರಬೇಕು. ಎಲ್ಲಾ ಬಗೆಯ ಪುಸ್ತಕಗಳನ್ನು ಓದುವುದರಿಂದ ಅವರ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ಮೊಬೈಲ್ ಫೋನ್ನಿಂದ ದೂರವಾಗುತ್ತಾರೆ.
- ಎಂ.ಎಸ್. ಉಷಾ ಪ್ರಕಾಶ್, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.