ಪ್ರಶ್ನಾತೀತ ಧೋರಣೆ ಒಳ್ಳೆಯದಲ್ಲ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಆಡಳಿತ ವೈಖರಿ ವಿರೋಧಿಸಿ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನೇ.ಭ. ರಾಮಲಿಂಗ ಶೆಟ್ಟಿ ರಾಜೀನಾಮೆ ನೀಡಿದ್ದಾರೆ (ಪ್ರ.ವಾ., ಜೂನ್ 27). ಗೌರವ ಕಾರ್ಯದರ್ಶಿಯಾಗಿದ್ದ ಪದ್ಮಿನಿ ನಾಗರಾಜು ಇಂತಹದ್ದೇ ಕಾರಣ ನೀಡಿ ಕೆಲವು ದಿನಗಳ ಹಿಂದೆ ಪರಿಷತ್ತಿನಿಂದ ಹೊರ ಬಂದಿದ್ದರು.
ಕನ್ನಡದ ಅಸ್ಮಿತೆ ಎತ್ತಿ ಹಿಡಿಯುವ ಕಸಾಪಕ್ಕೆ ತನ್ನದೇ ಆದ ಘನತೆ ಇದೆ. ಆದರೆ, ಜೋಶಿ ಅವರು ಹಲವು ಬಾರಿ ನೀಡಿದ ಸಡಿಲ ಹೇಳಿಕೆಗಳು ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ತಕ್ಕುದಾಗಿರಲಿಲ್ಲ. ಇಬ್ಬರು ಗೌರವ ಕಾರ್ಯದರ್ಶಿಗಳು ರಾಜೀನಾಮೆ ನೀಡಿರುವುದನ್ನು ನೋಡಿದರೆ, ಜೋಶಿ ಅವರ ಆಡಳಿತದಲ್ಲಿ ಉಸಿರುಗಟ್ಟಿಸುವ ವಾತಾವರಣ ಇರುವುದು ಸ್ಪಷ್ಟವಾಗಿದೆ. ಚುನಾವಣೆಯಲ್ಲಿ ಆಯ್ಕೆಯಾಗಿ ಬಂದಿರುವುದರಿಂದ ತಾನು ಪ್ರಶ್ನಾತೀತ ಎಂಬ ಧೋರಣೆಯು ಅಧ್ಯಕ್ಷರಲ್ಲಿ ಎದ್ದು ಕಾಣುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.
– ಚಂದ್ರಪ್ರಭ ಕಠಾರಿ, ಬೆಂಗಳೂರು
ಯಾವುದು ವಾಸ್ತವ?
‘ವಾಸ್ತವ ಅರ್ಥೈಸಿಕೊಳ್ಳಿ, ಚಳವಳಿ ಕೈಬಿಡಿ’ ಎಂದು ಸಚಿವ ಎಂ.ಬಿ. ಪಾಟೀಲ, ದೇವನಹಳ್ಳಿ– ಚನ್ನರಾಯಪಟ್ಟಣದ ರೈತರಿಗೆ ಮನವಿ ಮಾಡಿದ್ದಾರೆ (ಪ್ರ.ವಾ., ಜೂನ್ 27). ಕೈಗಾರಿಕೆಯೇ ನಿಜವಾದ ಅಭಿವೃದ್ಧಿ ಎಂಬರ್ಥದಲ್ಲಿ ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಕಾರ್ಪೊರೇಟ್ ವಲಯ ಬಿಂಬಿಸುವ ಮಾದರಿಯೇ ಅಭಿವೃದ್ಧಿ ಎನ್ನುವುದಾದರೆ ಮುಂದೆ ಹೊಟ್ಟೆಗೆ ತಿನ್ನಲು ಮಣ್ಣೂ ಸಿಕ್ಕುವುದಿಲ್ಲ ಎಂಬ ಅರಿವು ನಮಗಿರಬೇಕು. ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದು, ಸುಸ್ಥಿರ ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸುವುದು ಒಳ್ಳೆಯ ಕ್ರಮ. ಆಗ ಕೃಷಿಯೂ ಉಳಿಯುತ್ತದೆ; ಕೈಗಾರಿಕೆಯೂ ಕೈಗೂಡುತ್ತದೆ. ಈ ಮಾದರಿಯೇ ವಾಸ್ತವ.
– ಚಂದ್ರಶೇಖರ ತಾಳ್ಯ, ಹೊಳಲ್ಕೆರೆ
ಹುಲಿಗಳ ಸಾವು: ಹೊಣೆ ಯಾರು?
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ವಿಷಪ್ರಾಶನದಿಂದ ಮೃತಪಟ್ಟಿರುವುದು ವರದಿಯಾಗಿದೆ (ಪ್ರ.ವಾ., ಜೂನ್ 27). ಇದು ಕಗ್ಗೊಲೆ ಎಂಬುವುದರಲ್ಲಿ ಅನುಮಾನವಿಲ್ಲ. ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿ ನಡೆ, ಕಾಡಂಚಿನ ಗ್ರಾಮಗಳ ಜನರ ದ್ವೇಷಕ್ಕೆ ಹುಲಿಗಳು ಬಲಿಯಾಗಿವೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕರ್ತವ್ಯಲೋಪ ಎಸಗಿರುವ ಹಿರಿಯ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಜರುಗಿಸಬೇಕು.
– ಬಾಬು ಶಿರಮೋಜಿ, ಬೆಳಗಾವಿ
ಬೇಜವಾಬ್ದಾರಿ ನಡೆ ಸರಿಯಲ್ಲ
ರಾಜ್ಯದಲ್ಲಿ ಕೆಲವೆಡೆ ಅತಿವೃಷ್ಟಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ಅಪಾರ ಪ್ರಮಾಣದಲ್ಲಿ ಆಸ್ತಿ ಹಾನಿಯಾಗಿದೆ. ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಕೆಲವರು ಮನೆ ಕಳೆದುಕೊಂಡು ಸಂಕಟಪಡುತ್ತಿದ್ದಾರೆ. ಮತ್ತೊಂದೆಡೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತರು ನೋವು ಅನುಭವಿಸುತ್ತಿದ್ದಾರೆ. ಕೆಲವೆಡೆ ಅನಾವೃಷ್ಟಿಯಿಂದಲೂ ಜನರು ತೊಂದರೆಗೆ ಸಿಲುಕಿದ್ದಾರೆ. ಆದರೆ, ಇದರ ಪರಿವೆಯೇ ಇಲ್ಲವೆಂಬಂತೆ ರಾಜ್ಯದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕ್ಷುಲ್ಲಕ ರಾಜಕೀಯ ವಿಷಯಗಳನ್ನೇ ಬಡಬಡಿಸುತ್ತ ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರ ಮಾಡುತ್ತಿರುವುದು ರಾಜ್ಯದ ದೌರ್ಭಾಗ್ಯ.
– ಆರ್.ಎಸ್. ಅಯ್ಯರ್, ತುಮಕೂರು
ಭಾಷಾ ಬಿಕ್ಕಟ್ಟು ಪರಿಹರಿಸಲಿ
‘ತಮಿಳು, ಕನ್ನಡ ಮತ್ತಿತರ ಭಾಷೆಗಳಿಗೆ ತಾಯಿ’ ಎಂದು ನಟ ಕಮಲ್ ಹಾಸನ್ ಸೇರಿ ಇತರರು ಹೇಳಿಕೊಳ್ಳುತ್ತಿರುವುದರ ಮೂಲ ಎಲ್ಲಿದೆ ಎಂಬುದರ ಬಗ್ಗೆ ಮದ್ರಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ತಮಿಳ್ ಸೆಲ್ವಿ (ಪ್ರ.ವಾ., ಜೂನ್ 23) ಸ್ಪಷ್ಟಪಡಿಸಿದ್ದಾರೆ. ತಮಿಳಿನ ಸಾಹಿತಿಗಳಾದ ಸುಬ್ರಮಣ್ಯ ಭಾರತಿ ಅವರು ತಮ್ಮ ಕವನದಲ್ಲಿ ಹಾಗೂ ಸುಂದರಂ ಪಿಳ್ಳೈ ಅವರು ರಚಿಸಿರುವ ನಾಡಗೀತೆಯಲ್ಲಿ ಕನ್ನಡ, ತೆಲುಗು, ಮಲಯಾಳ ಭಾಷೆಗೆ ತಮಿಳು ತಾಯಿ ಭಾಷೆ ಎಂದು ಬರೆದಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.
ಸಾಹಿತ್ಯಾಭ್ಯಾಸಿಗಳಾದ ತಮಿಳರೂ ಈ ಮಿಥ್ಯೆಯನ್ನೇ ಬೆಂಬಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾಷಾ ತಜ್ಞರು ಹಾಗೂ ವಿದ್ವಾಂಸರು ಇತ್ತ ಗಮನ ಹರಿಸಿ ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿರುವ ಈ ಎಲ್ಲ ಭಾಷೆಗಳೂ ಸೋದರ ಭಾಷೆಗಳೆಂಬುದನ್ನು ಸೋದಾಹರಣವಾಗಿ ಪ್ರತಿಪಾದಿಸುವ ಅಗತ್ಯವಿದೆ.
– ಇ.ವಿ. ಸತ್ಯನಾರಾಯಣ, ಬೆಂಗಳೂರು
ತಿಪಟೂರು ಕೊಬ್ಬರಿ: ಜಿಐ ಟ್ಯಾಗ್ ಬೇಕು
ಕೆಲವು ತಿಂಗಳಿನಿಂದ ಉಂಡೆ ಕೊಬ್ಬರಿ ಧಾರಣೆಯು ಏರಿಕೆಯಾಗುತ್ತಿದೆ. ತೋಟಗಳಲ್ಲಿ ಮರಗಳು ರೋಗಬಾಧೆಗೆ ತುತ್ತಾಗಿರುವುದರಿಂದ ತೆಂಗಿನಕಾಯಿ ಇಳುವರಿ ಕಡಿಮೆಯಾಗಿದೆ. ಮತ್ತೊಂದೆಡೆ ರೈತರು ಹೆಚ್ಚಾಗಿ ಎಳನೀರು ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಕೊಬ್ಬರಿ ದಾಸ್ತಾನು ಇಲ್ಲವಾಗಿದೆ. ಇದೇ ಧಾರಣೆ ಏರಿಕೆಗೆ ಕಾರಣ.
ಇನ್ನೊಂದೆಡೆ ಅಳಿದುಳಿದ ಕೊಬ್ಬರಿ ದಾಸ್ತಾನು ಮಾಡಲು ಶೇಖರಣಾ ಘಟಕಗಳಿಗೆ ವಾರ್ಷಿಕವಾಗಿ ಸಾವಿರಾರು ರೂಪಾಯಿ ಭರಿಸಬೇಕಿದೆ. ಈ ಘಟಕಗಳಿಗೆ ಸರ್ಕಾರದಿಂದ ಸಹಾಯಧನ ಸಿಗುತ್ತಿಲ್ಲ. ತಿಪಟೂರು ಕೊಬ್ಬರಿಗೆ ಭೌಗೋಳಿಕ ಸೂಚ್ಯಂಕ ಪಟ್ಟ (ಜಿಐ ಟ್ಯಾಗ್) ನೀಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ, ಮಾರುಕಟ್ಟೆಯಲ್ಲಿನ ದರ ಏರಿಳಿತವನ್ನು ಸರಿದೂಗಿಸಲು ನೆರವಾಗಲಿದೆ.
– ದರ್ಶನ್ ಎನ್.ಕೆ., ಗುಬ್ಬಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.