ADVERTISEMENT

ವಾಚಕರ ವಾಣಿ | ಕಸಾಪ: ಕನ್ನಡಿಗರ ಆಸ್ತಿಯಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಫೆಬ್ರುವರಿ 2022, 19:30 IST
Last Updated 20 ಫೆಬ್ರುವರಿ 2022, 19:30 IST

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಹಾಗೂ ಕನ್ನಡಿಗರ ಹೆಮ್ಮೆ. ಅದು ಸ್ಥಾಪನೆಗೊಂಡಾಗ ಇದ್ದ ಕೆಲವು ಉಪನಿಯಮಗಳಿಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳು ಮನೆಯ ಅಡಿಗಲ್ಲನ್ನು ಮತ್ತಷ್ಟು ಗಟ್ಟಿ ಮಾಡುವಂತೆ ಇರಬೇಕು. ಸದಸ್ಯತ್ವ ಶುಲ್ಕವನ್ನು ₹ 250ಕ್ಕೆ ಇಳಿಸಿರುವುದು ಸ್ವಾಗತಾರ್ಹ. ಹೊಸದಾಗಿ ನೋಂದಣಿಯಾಗುವವರು ಆನ್‌ಲೈನ್‌ ಮೂಲಕ ಅರ್ಜಿ, ಹಣ ಪಾವತಿಸಿ ಸುಲಭವಾಗಿ ನೋಂದಣಿಯಾಗಲು ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಯುವಪೀಳಿಗೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಸೆಳೆಯುವುದು ಅತ್ಯಂತ ಜರೂರಾದ ಕೆಲಸ ವಾಗಿದ್ದು, ಇದಕ್ಕೆ ಸಮೂಹ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಬೇಕು.

ನೋಂದಣಿಯಾದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪುಸ್ತಕಗಳು ಸಿಗುವಂತೆ ನೋಡಿಕೊಳ್ಳಬೇಕು. ರಾಷ್ಟ್ರೀಯ ಹಬ್ಬಗಳು, ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಹಬ್ಬದ ಸಂದರ್ಭಗಳಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟ ದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಬೇಕು. ನೋಂದಣಿಯಾಗುವವರಿಗೆ ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನದಂತಹ ಹಬ್ಬಗಳಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳು ದೊರಕುವಂತೆ ಮಾಡಬೇಕು. ವಿದ್ಯುನ್ಮಾನ ಪ್ರಪಂಚದಲ್ಲಿ ಹಣ ಪಾವತಿ ಡಿಜಿಟಲ್‌ ರೂಪದಲ್ಲಿರುವಾಗ, ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ದೇಣಿಗೆ ನೀಡುವವರಿಗೆ ಸರಳ ರೀತಿಯಲ್ಲಿ ಹಣ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ, ಪರಿಷತ್ತು ಆರ್ಥಿಕ ಚೈತನ್ಯ ಹೊಂದಲು ಅನುಕೂಲವಾಗುತ್ತದೆ. ಅಷ್ಟಲ್ಲದೆ ಕನ್ನಡ ಸಾಹಿತ್ಯ
ಸಮ್ಮೇಳನದಂತಹ ಕನ್ನಡ ಹಬ್ಬದಲ್ಲಿ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಕನ್ನಡಿಗರಿಂದಲೇ ಕ್ರೋಡೀಕರಿಸಲು ಸಹ ಸಹಾಯಕವಾಗುತ್ತದೆ. ಇದರಿಂದ ಯಾರನ್ನೂ ಅವಲಂಬಿಸದೆ ಕನ್ನಡಿಗರಿಂದಲೇ ಕನ್ನಡದ ಹಬ್ಬವನ್ನು ಆಚರಿಸಲು ಸಾಧ್ಯವಾಗುವುದು.

-ಗಣೇಶ ಆರ್‌., ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.