ಕುದಿಯುತ್ತಿದೆ ಭೂಮಿ (ಪ್ರ.ವಾ., ಡಿ. 4) ಮತ್ತು ಮುಂದಿದೆ ಕರಾಳ ದಿನ (ಪ್ರ.ವಾ., ನ. 21) ಸುದ್ದಿಗಳನ್ನು ಓದಿ ಗಾಬರಿಯಾಯಿತು. ಇಂತಹ ದುರದೃಷ್ಟಕರ ಕಾಲವನ್ನು ಮುಂದಿನ ಪೀಳಿಗೆ ಎದುರಿಸಬೇಕಾಗಿ ಬಂದಿರುವುದನ್ನು ತಿಳಿದರೆ ವಿಷಾದವಾಗುತ್ತದೆ. ಮೋಜು- ಮಸ್ತಿ, ಭೋಗವೇ ಜೀವನವೆನ್ನುವ ರೋಗಗ್ರಸ್ತ ಕಾಲವಿದು. ಮನುಷ್ಯನ ಪ್ರಜ್ಞೆ, ಸಂವೇದನಾಶೀಲತೆ ಜಡ್ಡುಗಟ್ಟಿದ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಅದನ್ನು ಸರಿಪಡಿಸಲು ಈಗ ಕೈಗೊಂಡಿರುವ ಕ್ರಮಗಳು ಏನೇನೂ ಸಾಲವು. ಇದು ಕ್ಯಾನ್ಸರ್ ರೋಗಕ್ಕೆ ಆಸ್ಪಿರಿನ್ ಕೊಟ್ಟಂತೆ.
ಕೋಪಿಷ್ಟಳಾದ ಭೂಮಿತಾಯಿಯ ಸಾಂತ್ವನಕ್ಕಾಗಿ ಹಾಗೂ ಮುಂದಿನ ಪೀಳಿಗೆಯ ಒಳಿತಿಗಾಗಿ ಸಮರೋಪಾದಿಯಲ್ಲಿ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಯುವಪೀಳಿಗೆಯನ್ನು ಜಾಗೃತಗೊಳಿಸಿ ವಿವಿಧ ಬಗೆಯಲ್ಲಿ ಕ್ರೀಯಾಶೀಲರನ್ನಾಗಿಸಬೇಕು. ಜಲ- ನೆಲ ರಕ್ಷಣೆ, ಪೋಷಣೆಯಂತಹ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬೋಧಿಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂಮಿಯ ಸಾಂತ್ವನಕ್ಕೆ ಅವಶ್ಯವಾದ ಕಾನೂನು ರಚಿಸಿ ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಈ ಕ್ರಮಗಳನ್ನು ಪರಸ್ಪರ ಸಹಕಾರದಿಂದ ಸ್ಫೂರ್ತಿದಾಯಕವಾಗಿ ಪಾಲಿಸಿದಾಗ ಮಾತ್ರ ಉಳಿಗಾಲ. ಇಲ್ಲವಾದರೆ ವಿನಾಶ ತಪ್ಪಿದ್ದಲ್ಲ.
– ಸಿದ್ರಾಮಪ್ಪ ದಿನ್ನಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.