ರಸ್ತೆ ಅಪಘಾತಗಳನ್ನು ತಪ್ಪಿಸಲು ಸುಮಾರು ಒಂದೂವರೆ ಅಡಿ ಎತ್ತರದ ವೇಗ ನಿಯಂತ್ರಕ ರಸ್ತೆಯುಬ್ಬುಗಳನ್ನು ನಿರ್ಮಿಸಲಾಗಿರುತ್ತದೆ. ಅವೈಜ್ಞಾನಿಕವಾದ ಇಂತಹ ರಸ್ತೆಯುಬ್ಬುಗಳನ್ನು ದಾಟಲು ವಾಹನ ಚಾಲಕರು ಹರಸಾಹಸ ಪಡಬೇಕಿತ್ತು. ಹೀಗಾಗಿ, ಆರಿಂಚು ಎತ್ತರ ಹಾಗೂ ಮೂರಡಿ ಅಗಲದ ವೈಜ್ಞಾನಿಕ ರಸ್ತೆಯುಬ್ಬುಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಅದೇ ಪ್ರಕಾರ ರಾಜ್ಯ ಹೆದ್ದಾರಿಗಳು, ನಗರಗಳಲ್ಲೂ ಇಂತಹುದೇ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ವೈಜ್ಞಾನಿಕ ವೇಗತಡೆ ರಸ್ತೆಯುಬ್ಬು ನಿರ್ಮಿಸುವುದಾಗಿ ಕೇಂದ್ರ ಭೂಸಾರಿಗೆ ಸಚಿವರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಪ್ರಕಟಿಸಿದರು. ಮಹಾನಗರಪಾಲಿಕೆಗಳು ಕೆಲವನ್ನು ಮಾತ್ರ ಬದಲಿಸಿ ಉಳಿದವುಗಳನ್ನು ಬದಲಿಸಲಿಲ್ಲ. ರಾಜ್ಯ ಸರ್ಕಾರವು ರಾಜ್ಯ ಹೆದ್ದಾರಿಗಳ ಮೇಲಿನ ಅವೈಜ್ಞಾನಿಕ ವೇಗತಡೆಗಳನ್ನು ತೆಗೆಯಲಿಲ್ಲ.
ಈ ಕುರಿತು ವಿಧಾನಸಭೆಯಲ್ಲಿ ಈಗ ಚರ್ಚೆ ನಡೆದು, ವೈಜ್ಞಾನಿಕ ವೇಗನಿಯಂತ್ರಕ ರಸ್ತೆಯುಬ್ಬುಗಳನ್ನು ನಿರ್ಮಿಸಲು ಕ್ರಮ ಜರುಗಿಸುವುದಾಗಿ ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ. ಇದು ಸ್ವಾಗತಾರ್ಹ. ರಾಜ್ಯದ ಎಲ್ಲ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ, ಎಲ್ಲ ನಗರಗಳ ರಸ್ತೆಗಳಲ್ಲಿ ಈಗಿರುವ ವೇಗನಿಯಂತ್ರಕಗಳನ್ನು ಬದಲಾವಣೆ ಮಾಡಿ, ವೈಜ್ಞಾನಿಕ ವೇಗತಡೆ ನಿಯಂತ್ರಕಗಳನ್ನು ತ್ವರಿತವಾಗಿ ನಿರ್ಮಿಸಬೇಕು. ವಾಹನ ಚಾಲಕರು, ಪ್ರಯಾಣಿಕರು ನಿರಾತಂಕವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು.
-ಬಸವರಾಜ ಹುಡೇದಗಡ್ಡಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.