ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗದೆ ಹಿಂದೆ ಉಳಿದಿರುವ ಕುರಿತು ಬಹಳಷ್ಟು ಚರ್ಚೆ ಆಗುತ್ತಿದೆ. ಅಭಿವೃದ್ಧಿಯಾಗದೇ ಇರುವುದಕ್ಕೆ ಕಾರಣರಾರು? ಬಹಳಷ್ಟು ಅನುದಾನ ಬಂದರೂ ಅದನ್ನು ಸರಿಯಾಗಿ ಬಳಸದೇ ಇರುವ ಜನಪ್ರತಿನಿಧಿಗಳೇ? ಇಷ್ಟು ವರ್ಷವೂ ಅಂತಹ ಜನಪ್ರತಿನಿಧಿಗಳನ್ನೇ ಆರಿಸಿ ಕಳಿಸುತ್ತಿರುವ ಜನರೇ? ಸ್ವಲ್ಪ ಅಧಿಕಾರ, ಸವಲತ್ತು ಬಂದ ಕೂಡಲೇ ಬೆಂಗಳೂರಿಗೆ ಬಂದು ನೆಲೆಸಿ ಊರನ್ನೇ ಮರೆಯುವ ರಾಜಕಾರಣಿಗಳು ಮತ್ತು ಅಧಿಕಾರಿಗಳೇ? ಸಮರ್ಪಕವಾಗಿ ಜಾರಿ ಮಾಡದಿದ್ದರೆ ಎಂತಹ ಯೋಜನೆಯೇ ಆಗಲಿ ವಿಶೇಷ ಅನುದಾನವೇ ಆಗಲಿ ಹಳ್ಳ ಹಿಡಿಯುತ್ತವೆ. ಉದಾಹರಣೆಗೆ, ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕದ ಸ್ಥಳೀಯ ಹುದ್ದೆಗಳಿಗೆ ಸ್ಥಳೀಯರಿಗೆ ನೀಡಿದ ಮೀಸಲಾತಿಯನ್ನೇ ತೆಗೆದುಕೊಳ್ಳಿ. ಆ ಮೀಸಲಾತಿಯಡಿಯಲ್ಲಿ ನೇಮಕಾತಿಯನ್ನೋ ಬಡ್ತಿಯನ್ನೋ ಪಡೆದ ಎಷ್ಟು ಮಂದಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ? ಮೀಸಲಾತಿಯಡಿಯಲ್ಲಿ ಹುದ್ದೆಗಳನ್ನು ಪಡೆದು ಬೆಂಗಳೂರಿಗೋ ಅಥವಾ ಇನ್ಯಾವುದೋ ಅನುಕೂಲಕರವಾದ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಂಡು ಹಾಯಾಗಿದ್ದಾರೆ.
ಇತ್ತ ಕಲ್ಯಾಣ ಕರ್ನಾಟಕದಲ್ಲಿ ಅದೇ ಖಾಲಿ ಹುದ್ದೆಗಳು, ಬಾಕಿ ಉಳಿಯುವ ಸರ್ಕಾರಿ ಕಾರ್ಯಗಳು. ಅಲ್ಲಿಗೆ ಮತ್ತೊಂದು ವಿಫಲ ಯೋಜನೆ. ಮೀಸಲಾತಿಯಡಿಯಲ್ಲಿ ನಡೆದ ನೇಮಕಾತಿ, ಬಡ್ತಿ ದಾಖಲೆಗಳನ್ನು ಪರಿಶೀಲಿಸಿದರೆ ಎಲ್ಲವೂ ತಿಳಿಯುತ್ತದೆ. ಆದರೆ ಅದನ್ನು ಯಾರೂ ಸರಿ ಮಾಡುವುದಿಲ್ಲ. ಮತ್ತೆ ಅದೇ ಗೋಳು: ಕಲ್ಯಾಣ ಕರ್ನಾಟಕ ಹಿಂದುಳಿದಿದೆ.
-ಮಂಜುನಾಥ ಎಸ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.