ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು. ಅದರ ಬೆನ್ನಿಗೇ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯ ಆದೇಶ ಹೊರಬಿತ್ತು. ಇದೀಗ ಕರ್ನಾಟಕ ವೀರಶೈವ– ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಮುಂದಾಗಿದೆ! ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ವರ್ಗಗಳಿಗೆ ಈ ಹಿಂದೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ, ಶೋಷಿತ ವರ್ಗಗಳನ್ನು ಮೇಲೆತ್ತುವ ಕೆಲಸವಾಗುತ್ತಿತ್ತು. ಆದರೀಗ ರಾಜ್ಯ ಸರ್ಕಾರವು ಉಪಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಿದೆ. ಹೀಗೆ ಚುನಾವಣೆಯ ಕಾರಣಕ್ಕೆ ನಿಗಮಗಳನ್ನು ಸ್ಥಾಪಿಸುವುದು ಸರಿಯಲ್ಲ. ಒಮ್ಮೆ ಸ್ಥಾಪನೆಗೊಂಡರೆ, ಆನಂತರ ಪ್ರತಿವರ್ಷ ನಿಗಮಗಳಿಗೆ ಸರ್ಕಾರ ಅನುದಾನ ನೀಡಿ, ಅವುಗಳಿಗೆ ಸಿಬ್ಬಂದಿ, ಮೂಲ ಸೌಲಭ್ಯ ಒದಗಿಸಿ ಮುನ್ನಡೆಸಬೇಕಾಗುತ್ತದೆ. ಅದರಿಂದ ಬೊಕ್ಕಸಕ್ಕೆ ಹೊರೆ.
ಈ ರೀತಿ ನಿಗಮಗಳನ್ನು ಸ್ಥಾಪಿಸುತ್ತಾ ಹೋದರೆ ಅದಕ್ಕೆ ಅಂತ್ಯವೆಂಬುದೇ ಇರುವುದಿಲ್ಲ. ರಾಜ್ಯದ ಎಲ್ಲ ಶಾಸಕರಿಗೂ ಒಂದೊಂದು ನಿಗಮದ ಅಧ್ಯಕ್ಷ ಸ್ಥಾನ ದೊರಕಿಸಿಕೊಡಬಹುದು. ರಾಜಕೀಯ ಮೇಲಾಟಕ್ಕಾಗಿ, ಉಪಚುನಾವಣೆ ಕಾರಣಕ್ಕೆ ಈ ರೀತಿ ನಿಗಮಗಳನ್ನು ಸ್ಥಾಪಿಸುವ ಪರಿಪಾಟವನ್ನು ಸರ್ಕಾರ ನಿಲ್ಲಿಸಬೇಕು.
-ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.