ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದಿರುವ ರಾಜ್ಯದ ಇಂಧನ ಸಚಿವರು, ಅಭಿವೃದ್ಧಿ ಕಾಮಗಾರಿಗಳ ವೆಚ್ಚದ ಕಾರಣ ನೀಡಿದ್ದಾರೆ. ಅದರ ಜೊತೆಗೇ, ಸರ್ಕಾರದ ಅನೇಕ ಇಲಾಖೆಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ಬರಬೇಕಾದ ಬಾಕಿಯೇ ₹ 12,000 ಕೋಟಿ ಇದೆ ಅಂದಿದ್ದಾರೆ (ಪ್ರ.ವಾ., ಜ. 22). ಸರ್ಕಾರದ ಇಲಾಖೆಗಳೇ ಕಂಪನಿಗಳಿಗೆ ಅಷ್ಟು ಮೊತ್ತವನ್ನು ಬಾಕಿ ಇಟ್ಟು ಅವು ನಷ್ಟ ಅನುಭವಿಸುವಂತೆ ಮಾಡಿ, ಆ ಹೊರೆಯನ್ನು ಸಾಮಾನ್ಯ ಬಳಕೆದಾರರ ಮೇಲೆ ಹೊರಿಸುವುದು ಎಷ್ಟು ನ್ಯಾಯ?
ಇಲ್ಲಿ ಎರಡು ಪ್ರಶ್ನೆಗಳು ಹುಟ್ಟುತ್ತವೆ. ಒಂದು, ಯಾವ ಇಲಾಖೆಗಳಿಂದ ಬಾಕಿ ಇದೆಯೋ ಅವುಗಳ ಸೇವೆಯನ್ನು ಪಡೆಯುವ ನಾಗರಿಕರ ಮೇಲೆ ಆ ಇಲಾಖೆಗಳು- ಉದಾಹರಣೆಗೆ ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಜಲಮಂಡಳಿ- ತಮ್ಮ ಸೇವಾ ಶುಲ್ಕಗಳನ್ನು ಹೆಚ್ಚಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದಾದಲ್ಲಿ ಅಧಿಕ ವಿದ್ಯುತ್ ದರದ ಜೊತೆಗೆ ಇತರ ಶುಲ್ಕಗಳ ಹೊರೆಯೂ ನಾಗರಿಕರ ಮೇಲೆ ಬೀಳಲಿದೆ. ಎರಡು, ಸರಬರಾಜು ಕಂಪನಿಗಳು ನಷ್ಟದಲ್ಲಿವೆ ಎಂಬ ಕಾರಣ ನೀಡಿ ಅವುಗಳನ್ನು ಖಾಸಗಿ ಕ್ಷೇತ್ರಕ್ಕೆ ಮಾರಾಟ ಮಾಡುವ ಹುನ್ನಾರವೂ ಇರಬಹುದು. ಅಗತ್ಯ ವಸ್ತುಗಳ ಬೆಲೆಗಳು ಈಗಾಗಲೇ ನಿರಂತರವಾಗಿ ಏರುತ್ತಿರುವಾಗ ಸರಬರಾಜು ಕಂಪನಿಗಳಿಗೆ ಆಗುವ ನಷ್ಟವನ್ನು ತುಂಬಿಸಲು ದರ ಪರಿಷ್ಕರಣೆ ಮಾಡುವುದು ಮತ್ತೊಂದು ಜನವಿರೋಧಿ ನೀತಿ ಎನ್ನದೆ ನಿರ್ವಾಹವಿಲ್ಲ.
- ಟಿ.ಆರ್.ಭಟ್,ಮಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.